ಬೆಂಗಳೂರು : ಟೆಕ್ ಸಿಟಿ ಆಗಿದ್ದ ಬೆಂಗಳೂರನ್ನು ಕಾಂಗ್ರೆಸ್ ಸರ್ಕಾರ ಈಗ ಟ್ಯಾಂಕರ್ ಸಿಟಿ ಮಾಡಿದೆ. ಇಡೀ ನಗರ ಈಗ ಟ್ಯಾಂಕರ್ ಮಾಫಿಯಾದ ಕೈಯಲ್ಲಿ ಸಿಲುಕಿದೆ. ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿ ಅಪಾಯಕಾರಿಯಾಗಿದೆ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾಗುತ್ತಿದೆ. ನಮ್ಮ ಮಕ್ಕಳ ಮೇಲೆ ಹಲ್ಲೆ ನಡೆಯುತ್ತಿದೆ. ಇದು ಸಾಮಾನ್ಯ ವಿಚಾರವಲ್ಲ. ಕಾಂಗ್ರೆಸ್ ಬಗ್ಗೆ ಆದಷ್ಟು ಅಲರ್ಟ್ ಆಗಿರಿ ಎಂದು ಮೋದಿ ಹೇಳಿದರು.
ಬೆಂಗಳೂರನ್ನು ಅದ್ಭುತ ನಗರವಾಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಎನ್ಡಿಎ ಅವಧಿಯಲ್ಲಿ ತೆರಿಗೆ ಪದ್ಧತಿ ಬದಲಾವಣೆಯಾಗಿದೆ. ಜಿಎಸ್ಟಿ ಜಾರಿ ನಂತರ ಪರೋಕ್ಷ ತೆರಿಗೆ ಹೊರೆ ತಪ್ಪಿದೆ. 2014, 2019ರ ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಗೆಲ್ಲಿಸಿದ್ರಿ. ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸಂಕಷ್ಟದಲ್ಲಿತ್ತು, ಈಗ ಬದಲಾಗಿದೆ ಎಂದರು.
2014ರಲ್ಲಿ ಬೆಂಗಳೂರಿನಲ್ಲಿ ಕೇವಲ 17 ಕಿ.ಮೀ. ಮೆಟ್ರೋ ರೈಲು ಮಾರ್ಗ ಇತ್ತು. ಈಗ ಅದು 70 ಕಿ.ಮೀ.ಗೆ ವಿಸ್ತರಿಸಿದೆ. ಹಳದಿ ಮಾರ್ಗವೂ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ. ಉಪನಗರ ರೈಲು ಯೋಜನೆಯೂ ಬೆಂಗಳೂರಿನ ಸಂಚಾರ ಸಮಸ್ಯೆಗೆ ಪರಿಹಾರ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
