ಬೆಂಗಳೂರು : ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸಿಟ್ಟು ಬಂದಿದೆ. ಈ ಸಿಟ್ಟನ್ನು ಚುನಾವಣಾ ಆಯೋಗಕ್ಕೂ ತಲುಪಿಸಲಾಗಿದೆ.
ಅವರ ಈ ಕೋಪಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಮತ್ತು ಮುಸಲೋನಿಗೆ ಹೋಲಿಸಿ ಸಿದ್ದರಾಮಯ್ಯ ಟೀಕೆ ಮಾಡಿದ್ದು. ಬಿಜೆಪಿ ನಾಯಕರ ಪ್ರಕಾರ ಈ ಆರೋಪ ಮಾಡುವ ಮೂಲಕ ಸಿದ್ದರಾಮಯ್ಯ ಅವಹೇಳನ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈಬಿಡಬೇಕು .
ಇದು ಬಿಜೆಪಿಯ ಸುರೇಶ್ ಕುಮಾರ್ ಮತ್ತಿತರ ನಾಯಕರುಗಳ ಒತ್ತಾಯ,
ಶಾಸಕ ಎಸ್. ಸುರೇಶ್ ಕುಮಾರ್ ಮತ್ತು ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಘಟಕದ ಅಧ್ಯಕ್ಷ ವಿವೇಕ್ ಎಸ್ . ರೆಡ್ಡಿ ನೇತೃತ್ವದ ನಿಯೋಗ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅವರನ್ನು ಶನಿವಾರ ಭೇಟಿ ಮಾಡಿ ದೂರು ಸಲ್ಲಿಸಿದೆ.
ದೂರು ಸಲ್ಲಿಸಿದ ಬಳಿಕ ಎಎನ್ ಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಎಸ್, ಸುರೇಶ್ ಕುಮಾರ್, ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಳ್ಳೇಗಾಲದಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಮೋದಿ ಅವರನ್ನು ಹಿಟ್ಲರ್, ಮುಸಲೋನಿಗೆ ಹೋಲಿಸಿದ್ದಾರೆ. ಮೋದಿ ಅವರು ಸರ್ವಾಧಿಕಾರಿ ಎಂದಿದ್ದಾರೆ. ಮೋದಿ ಅವರ ನಾಯಕತ್ವದಡಿ ಸಂವಿಧಾನ ಅಪಾಯದಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದು ಅವರ ಹತಾಶೆಯನ್ನು ತೋರಿಸುತ್ತದೆ. ಹೀಗಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ತಿಳಿಸಿದರು.
ಈ ವಿಚಾರದಲ್ಲಿ ಸ್ವಲ್ಪ ಮಟ್ಟಿನ ವಿಮರ್ಶೆ ಕೂಡ ನಡೆಯಬೇಕಾಗಿದೆ. ನಿಜವಾಗಿ ಪ್ರಧಾನಿ ನರೇಂದ್ರ ಮೋದಿಯವರು ಹಿಟ್ಲರ್ ಮತ್ತು ಮುಸಲೋನಿ ಅವರಿಗೆ ಹೋಲಿಸುವಂತೆ ಇದ್ದಾರಾ ? ಈ ಬಗ್ಗೆ ಬಿಜೆಪಿ ನಾಯಕರು ಅಧ್ಯಯನ ಮಾಡಬೇಕಾಗಿದೆ.
ಇನ್ನೂ ಪ್ರಧಾನಿ ನರೇಂದ್ರ ಮೋದಿಯವರು ಸರ್ವಾಧಿಕಾರಿಯಾ ? ಈ ಬಗ್ಗೆ ಕೂಡ ಅಧ್ಯಯನ ನಡೆಯಬೇಕು. ಆಗ ಸತ್ಯ ಹೊರಗೆ ಬಂದ ಮೇಲೆ ಸಿದ್ದರಾಮಯ್ಯ ಅವರ ಹೇಳಿಕೆ ನಿಜವಾ ಅಥವಾ ಸುಳ್ಳಾ ಎಂಬುದು ಗೊತ್ತಾಗುತ್ತದೆ. ಇದಾದ ಮೇಲೆ ಸಿದ್ದರಾಮಯ್ಯ ಸುಳ್ಳು ಹೇಳಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಲ್ಲವೆ ?
