ಬೆಂಗಳೂರು : ರಾಜ್ಯದಲ್ಲಿ ಬರ. ಕುಡಿಯಲು ನೀರಿಲ್ಲ.. ಬೇಸಾಯ ನಿಂತಿದೆ. ಉರಿ ಬಿಸಿಲು. ಬರ ಪರಿಹಾರಕ್ಕೆ ಹಣ ನೀಡಿ ಎಂದು ಕೇಂದ್ರವನ್ನು ಕೇಳಿಕೊಂಡು ಹಲವು ತಿಂಗಳುಗಳೇ ಕಳೆದು ಹೋಗಿವೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳು, ರಾಜ್ಯ ಸರ್ಕಾರ ಕೇಂದ್ರಕ್ಕೆ ಬರದ ಕುರಿತು ವರದಿಸಲ್ಲಿಸಿತ್ತು. ಅಂದರೆ ಕರ್ನಾಟಕ ಸರ್ಕಾರ ಬರದ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ 6 ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಾರ ಇನ್ನೂ ಮೂರು ತಿಂಗಳು ಮೊದಲೇ ವರದಿ ನೀಡಬೇಕಿತ್ತಂತೆ.
ಅಲ್ಲಾ ಸ್ವಾಮಿ ಬರಗಾಲ ಬಂದ ಮೇಲೆ ಬರಗಾಲ ಎಂದು ಬೇಡಿಕೆ ಸಲ್ಲಿಸಬೇಕೋ ಅಥವಾ ಒಂದು ವರ್ಷ ಮೊದಲೇ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಬೇಕೋ ? ಈ ಪ್ರಶ್ನೆಯನ್ನು ಅಮಿತ್ ಶಾ ಅವರಿಗೆ ಕೇಳುವವರು ಯಾರು ?
ರಾಜ್ಯ ಸರ್ಕಾರ ಈ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದೆ. ನ್ಯಾಯಾಲಯ ಯಾವ ತೀರ್ಪು ನೀಡುತ್ತದೆಯೋ ನೋಡಬೇಕು,
ಈ ನಡುವೆ ಕಾಂಗ್ರೆಸ್ ಪಕ್ಷ ಚುನಾವಣಾ ಅಯೋಗದ ಮೊರೆ ಹೋಗಿದೆ. ಬರ ಪರಿಹಾರ ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆಯೂ ಅದು ಮನವಿ ಮಾಡಿದೆ.
ಮಾಜಿ ಸಂಸದ ವಿ.ಎಸ್ ಉಗ್ರಪ್ಪ ನೇತೃತ್ವದ ಕಾಂಗ್ರೆಸ್ ನಿಯೋಗ ನಿನ್ನೆ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿತ್ತು ಉಪಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಚುನಾವಣಾ ಆಯೋಗಕ್ಕೆ ಬರೆದ ಮನವಿ ಪತ್ರವನ್ನು ಮುಖ್ಯ ಚುನಾವಣಾ ಅಧಿಕಾರಿಗೆ ಸಲ್ಲಿಸಲಾಯಿತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಮತ್ತು ಹೆಚ್ಚುವರಿ ಬೆಂಬಲ ನಿಧಿಯಿಂದ 4,663 ಕೋಟಿ ರೂಪಾಯಿ ಹಾಗೂ ಭೀಕರ ಬರ ಪರಿಸ್ಥಿತಿಯನ್ನು ಎದುರಿಸಲು ರಾಜ್ಯಕ್ಕೆ ಹೆಚ್ಚುವರಿಯಾಗಿ 18,171 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಡಿಕೆ ಶಿವಕಮನವಿ ಮಾಡಿದ್ದಾರೆ.
ಪತ್ರದಲ್ಲಿ ರಾಜ್ಯದ 224 ತಾಲೂಕುಗಳು ತೀವ್ರ ಬರಗಾಲ ಎದುರಿಸುತ್ತಿದೆ. 48 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದ್ದು, ಸುಮಾರು 37,000 ಕೋಟಿ ರೂ.ನಷ್ಟು ಹಾನಿಯಾಗಿದೆ. ಎನ್ಡಿಆರ್ಎಫ್ ಪ್ರಕಾರ ಕನಿಷ್ಠ 4663 ಕೋಟಿ ರೂ. ಬೆಳೆ ಹಾನಿ ಪರಿಹಾರ ಅಗತ್ಯ ಇದೆ. ಈ ಸಂಬಂಧ ನವೆಂಬರ್ನಲ್ಲಿ ಕೇಂದ್ರ ಸರ್ಕಾರಕ್ಕೆ ಬರ ನಷ್ಟದ ಮೆಮೊರಂಡಂ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದಾರೆ.