ನಾನಾಗಲಿ ದೇವೇಗೌಡರಾಗಲಿ ಯಾವತ್ತಿಗೂ ಹೆಣ್ಣು ಮಕ್ಕಳ ವಿಚಾರದಲ್ಲಿ ಅತ್ಯಂತ ಗೌರವಯುತವಾಗಿ ನಡೆದುಕೊಂಡಿದ್ದೇವೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಯಾರಾದರೂ ಹೆಣ್ಣು ಮಕ್ಕಳು ಯಾವುದೋ ಕೆಲಸಕ್ಕಾಗಿ ನಮ್ಮ ಬಳಿ ಬಂದಾಗ ಸಹಾಯ ಮಾಡಿದ್ದೇವೆ ಎಂದು ಮಹಿಳೆಯರ ಜೊತೆ ತಾವೆಷ್ಟು ಗೌರವದಿಂದ ನಡೆದುಕೊಂಡಿದ್ದೇವೆ ಎಂದು ಅವರು ವಿವರಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಮೇಲೆ ಬಂದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಉಪ್ಪು ತಿಂದವರು ನೀರು ಕುಡೀಯಲೇ ಬೇಕು, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ತನಿಖೆಯಾಗಿ ವಾಸ್ತವಾಂಶ ಹೊರಕ್ಕೆ ಬರಲಿ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಈ ವಿಷಯ ಪ್ರಸ್ತಾಪವಾದಗ ಅವರ ಮಾತಿನಲ್ಲಿ ಆಶ್ಚರ್ಯವಾಗಲಿ, ಆಘಾತವಾಗಲಿ ಸಿಟ್ಟಾಗಲಿ ಇರಲಿಲ್ಲ. ನನಗೆ ಇದೆಲ್ಲ ಗೊತ್ತು ಎಂಬಂತೆ ತಣ್ಣನೆಯ ಪ್ರತಿಕ್ರಿಯೆಯನ್ನು ಅವರು ನೀಡಿದರು.
ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಅದು ನನಗೆ ಸಂಬಂಧ ಪಟ್ಟಿಲ್ಲ. ಸರ್ಕಾರ ಎಸ್ಐಟಿ ತನಿಖೆಗೆ ಆದೇಶ ಮಾಡಿದ್ದಾರೆ. ಅವರು ವಿದೇಶಕ್ಕೆ ಹೋಗಿದ್ದರೂ ಕರೆದುಕೊಂಡು ಬರುವ ಜವಾಬ್ದಾರಿ ಅವರದ್ದು. ಅವರು ಕರೆದುಕೊಂಡು ಬರುತ್ತಾರೆ. ವಿಚಾರಣೆ ನಡೆಸುತ್ತಾರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದರು.