ನ್ಯಾಯಾಲಯದಿಂದ ಉಗಿಸಿಕೂಂಡ ಮೇಲೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರಕ್ಕೆ ಹಣವನ್ನು ಬಿಡುಗಡೆ ಮಾಡಿದೆ.
ಕಳೆದ ಅಕ್ಟೋಬರ್ ನಿಂದಲೇ ಬರ ಪರಿಹಾರಕ್ಕೆ ಹಣ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡುತ್ತಲೇ ಬಂದಿತ್ತು. ಆದರೆ ಕೇಂದ್ರ ಕ್ಯಾರೇ ಅನ್ನಲಿಲ್ಲ. ಅನಿವಾರ್ಯವಾಗಿ ಕರ್ನಾಟಕ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಏರಬೇಕಾಯಿತು.
ಈ ವಿಚಾರವನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಲಯ ಇಂತಹ ಸಣ್ನ ಪುಟ್ಟ ವಿಚಾರಗಳಿಗೂ ನ್ಯಾಯಾಲಯಕ್ಕೆ ಬರಬೇಕು ಎಂದರೆ ಏನು ಎಂದು ಕೇಂದ್ರ ಸರ್ಕಾರವನ್ನು ಝಾಡಿಸಿತ್ತು. ಆಗ ಇಲ್ಲ ಬಿಡುಗಡೆ ಮಾಡುತ್ತೇವೆ ಎಂದು ಕೇಂಡ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಹಣ ಬಿಡುಗಡೆಗೆ ನ್ಯಾಯಾಲಯ ಒಂದು ವಾರದ ಕಾಲಾವಧಿಯನ್ನು ನೀಡಿತ್ತು.
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಕರ್ನಾಟಕದಲ್ಲಿ ಮುಕ್ತಾಯವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡುವುದ ನಿರ್ಧಾರವನ್ನು ಪ್ರಕಟಿಸಿತು
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮೊತ್ತದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ನಾವು ಕೇಳಿದ್ದು ೧೮ ಸಾವಿರ ಕೋಟಿ. ಅಷ್ಟು ಹಾನಿಯಾಗಿದೆ . ಆದರೆ ಕೇಂದ್ರ ಸರ್ಕಾರ ಈಗ ೩೪೦೦ ಕೋಟಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಇದು ಏನಕ್ಕೂ ಸಾಲದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಬರ ಪರಿಹಾರಕ್ಕಾಗಿ 18,172 ಕೋಟಿ ಹಣ ಬೇಡಿಕೆ ಇಟ್ಟಿತ್ತು. ಬೇಡಿಕೆ ಇಟ್ಟು ತಿಂಗಳುಗಳೇ ಕಳೆದರೂ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸಹಿತ ಸಂಪುಟ ಸಚಿವರು ಆರೋಪಿಸಿದ್ದರು.
ನೆರೆ ಪರಿಹಾರವೆಂದು ತಮಿಳುನಾಡಿಗೆ 275 ಕೋಟಿ ರೂಪಾಯಿ ಪರಿಹಾರವನ್ನು ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಘೋಷಿಸಿದೆ.