ಬೆಂಗಳೂರು: ಪ್ರವಾಹ ಸಂತ್ರಸ್ತರ ಹಣವನ್ನು, ಅದರಲ್ಲೂ ಜನರು ದೇಣಿಗೆ ಕೊಟ್ಟ ಹಣವನ್ನು ವಿಮಾನದ ಟಿಕೆಟ್ ಖರ್ಚಿಗೆ ಹಾಗೂ ಪಂಚತಾರಾ ಹೋಟೆಲ್ ಮೋಜು ಮಸ್ತಿಗೆ ಕಾಂಗ್ರೆಸ್ ನಾಯಕರು ಬಳಸಿಕೊಂಡಿದ್ದಾರೆ ಎಂದು ಜಾತ್ಯತೀತ ಜನತಾದಳ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ನೆರೆಪೀಡಿತ ಜನರಿಗೆ ಮೀಸಲಾದ ಹಣವನ್ನು ತನ್ನ ಸ್ವಂತ ಖರ್ಚಿಗೆ ಧಾರೆ ಎರೆದಿದ್ದು ಯಾರು? ಯಾವ ಪಕ್ಷ? ಹೇಳುವಿರಾ ಕಪಟಿ ಕಾಂಗ್ರೆಸ್ಸಿಗರೇ ಎಂದು ಪ್ರಶ್ನೆ ಮಾಡಿದೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಗ್ಗೆ ಅತ್ಯಂತ ನಿರ್ಲಜ್ಜ, ಹೊಣೆಗೇಡಿತನದ ಪೋಸ್ಟ್ ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ಕೊಟ್ಟಿರುವ ಜೆಡಿಎಸ್, ಮೂಡಾ ಮಳ್ಳ ಮುಖ್ಯಮಂತ್ರಿ!! ಭೂಗಳ್ಳ, ಸಿಡಿ ಶಿವು ಉಪ ಮುಖ್ಯಮಂತ್ರಿ!! ಇದು ಕನ್ನಡಿಗರಿಗೆ ಕಾಂಗ್ರೆಸ್ ಕೊಟ್ಟಿರುವ ಕಳಂಕಿತರ ಭಾಗ್ಯ!!! ಎಂದು ಮೂದಲಿಸಿದೆ.
ಕದ್ದ ವಾಚ್ ಕಟ್ಟಿದವರು ಯಾರು? ಮೂಡವನ್ನು ಮುಕ್ಕಿದ ಮುಖ್ಯಮಂತ್ರಿ ಯಾರು? ಸೈಟುಗಳಿಗೆ ಬೆಲೆ ಕಟ್ಟಿದ ರಿಯಲ್ ಎಸ್ಟೇಟ್ ವ್ಯಾಪಾರಿ ಯಾರು? ಲೂಟಿ, ದಂಧೆಗಳ ಅಪರಾವತಾರ, ಗುತ್ತಿಗೆದಾರರನ್ನು ಹಿಂಸಿಸಿ ಕೊಳ್ಳೆ ಹೊಡೆದ ಕಲೆಕ್ಷನ್ ಕಿಂಗ್ ಡೂಪ್ಲಿಕೇಟ್ ಸಿಎಂ ಯಾರು? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಜೆಡಿಎಸ್ ಕೇಳಿದೆ.
ಪ್ರವಾಹ ಸಂತ್ರಸ್ತರ ಹಣವನ್ನು, ಅದರಲ್ಲೂ ಜನರು ದೇಣಿಗೆ ಕೊಟ್ಟ ಹಣವನ್ನು ವಿಮಾನದ ಟಿಕೆಟ್ಟಿಗೆ, ಫೈವ್ ಸ್ಟಾರ್ ಹೋಟೆಲ್ ಮೋಜುಮಸ್ತಿಗೆ ಧಾರೆ ಎರೆದಿದ್ದು ಯಾರು? ಯಾವ ಪಕ್ಷ? ಹೇಳುವಿರಾ ಕಪಟಿ ಕಾಂಗ್ರೆಸ್ ನಾಯಕರೇ ಎಂದು ಟಾಂಗ್ ಕೊಟ್ಟಿರುವ ಜೆಡಿಎಸ್, ಒಂದು ಹೆಗಲ ಮೇಲೆ ರಿಯಲ್ ಎಸ್ಟೇಟ್ ರಾಮಯ್ಯ! ಇನ್ನೊಂದು ಹೆಗಲ ಮೇಲೆ ಭಾರತದ ಅತಿದೊಡ್ಡ ಭ್ರಷ್ಟ ಸಿಡಿಶಿವು!! ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನಿಮ್ಮ ಮುಖವನ್ನೊಮ್ಮೆ ನೋಡಿಕೊಳ್ಳಿ. ನೀವು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುತ್ತೀರಿ.. ಲಜ್ಜೆಗೇಡಿಗಳು. ಕುಮಾರಸ್ವಾಮಿ ಅವರಿಗೆ ಕೊಡುವುದು ಗೊತ್ತು, ನಿಮಗೆ ಬಾಚುವುದು ಗೊತ್ತು. ಕಾಮಾಲೆ ಕಾಂಗ್ರೆಸ್, ಕರ್ನಾಟಕಕ್ಕೆ ಅಂಟಿದ ವೈರಸ್.. ಎಂದು ಪಕ್ಷವು ಕೈ ಪಕ್ಷದ ಹರಿಹಾಯ್ದಿದೆ.
