ಬೆಂಗಳೂರು :”ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕಾವೇರಿ ನೀರು ನಿರ್ವಹಣಾ ಸಮಿತಿಯ ತೀರ್ಮಾನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಸರ್ವಪಕ್ಷ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, “ಕಾವೇರಿ ನೀರು ಹಂಚಿಕೆ ವಿಚಾರವಾಗಿ ಇಂದು ಸರ್ವಪಕ್ಷ ನಾಯಕರ ಸಭೆ ಕರೆದು ಚರ್ಚೆ ಮಾಡಿದ್ದೇವೆ. ಪ್ರಾಧಿಕಾರದವರು ಸಾಮಾನ್ಯವಾಗಿ ಜುಲೈ ತಿಂಗಳ ಅಂತ್ಯದಲ್ಲಿ ಅಥವಾ ಆಗಸ್ಟ್ ನಲ್ಲಿ ಸಭೆ ಮಾಡುತ್ತಿದ್ದರು. ಈ ಬಾರಿ ಬೇಗ ಸಭೆ ಮಾಡಿ ನಿತ್ಯ ಒಂದು ಟಿಎಂಸಿ ನೀರು ಬಿಡಬೇಕು ಎಂದು ಹೇಳಿದ್ದಾರೆ.
ನಮ್ಮ ಅಣೆಕಟ್ಟುಗಳಲ್ಲಿ ಶೇ. 30 ರಷ್ಟು ನಷ್ಟು ನೀರು ಕೊರತೆ ಇದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಸಮಿತಿಯ ತೀರ್ಮಾನದ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದು, ಇದೇ ವೇಳೆ ಈಗ ಹೊರಡಿಸಿರುವ ತೀರ್ಮಾನವನ್ನು ನಾವು ಗೌರವಿಸಬೇಕು” ಎಂದರು.
ಮೇಲ್ಮನವಿ ಆಲಿಸುವವರೆಗೂ ಎಷ್ಟು ನೀರು ಬಿಡಲಾಗುವುದು ಎಂದು ಕೇಳಿದಾಗ, “ಕಳೆದ ಎರಡು ಮೂರು ದಿನಗಳಿಂದ 1 ಟಿಎಂಸಿಗೂ ಹೆಚ್ಚು ನೀರು ಬಿಡಲಾಗಿದೆ. ಬಿಳಿಗುಂಡ್ಲು ವರೆಗೂ ತಲುಪಲು ಈ ನೀರು 250 ಕಿ.ಮೀ ಹರಿಯಬೇಕು. ಹೀಗಾಗಿ ನೀರಿನ ಪ್ರಮಾಣ ನೋಡಿಕೊಂಡು ನೀರು ಹರಿಸುತ್ತಿದ್ದೇವೆ. ಎರಡು ದಿನಗಳ ಕಾಲ 20 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಇಂದು 13 ಸಾವಿರ ಕ್ಯೂಸೆಕ್ ನೀರು ಹರಿಸಿದ್ದೇವೆ. ಸಮಿತಿಯ ತೀರ್ಮಾನ ಗೌರವಿಸಿ ಹಾಗೂ ರೈತರ ಹಿತ ಗಮನದಲ್ಲಿಟ್ಟುಕೊಂಡು ನಾವು ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.
