ಮೈಸೂರು: ನಾಲ್ಕನೇ ಆಷಾಡ ಶುಕ್ರವಾರ ಹಿನ್ನೆಲೆ ಇಂದು(ಶುಕ್ರವಾರ) ಕುಟುಂಬ ಸಮೇತರಾಗಿ ನಿಖಿಲ್ ಕುಮಾರಸ್ವಾಮಿಯವರು ನಾಡಿನ ಅಧಿದೇವತೆ ಮೈಸೂರಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದರು.
ಚಾಮುಡೇಶ್ವರಿ ದೇವಿ ದರ್ಶನದ ಬಳಿಕ ಮಾಧ್ಯಮ ಜೊತೆ ನಿಖಿಲ್ ಕುಮಾರಸ್ವಾಮಿಯವರು ಮಾತನಾಡಿ, ನಾನು ಮತ್ತು ನಮ್ಮ ಮುಖಂಡರು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದೇವೆ. ಕಳೆದ ವರ್ಷ ರೈತರು ಸಂಕಷ್ಟದಲ್ಲಿ ಇದ್ದರು, ಅದರೆ ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ನಮ್ಮ ರೈತರ ಸಂಕಷ್ಟಗಳು ಪರಿಹಾರ ಆಗಲಿ.ರಾಜ್ಯದ ಏಳುವರೇ ಕೋಟಿ ಜನತೆಗೂ ಒಳ್ಳೇದು ಆಗಲಿ, ನಾಡು ಸಮೃದ್ಧವಾಗಿರಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ಇನ್ನು ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ ಮುಡಾ ಮತ್ತು ವಾಲ್ಮೀಕಿ ಹಗರಣ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದೇ ನಮ್ಮ ಪಾದಯಾತ್ರೆ ಉದ್ದೇಶ. ರೈತರು ಕೃಷಿ ಚಟುವಟಿಕೆಯಿಂದ ಪಾದಯಾತ್ರೆ ಮುಂದೂಡಲು ಮನವಿ ಮಾಡಲಾಗಿತ್ತು. ನಮ್ಮಲ್ಲಿ ಯಾವುದೇ ಬಿರುಕು ಇಲ್ಲ ಸ್ಪಷ್ಟನೆ ನೀಡಿದರು. ಆದರೆ ಬಿಜೆಪಿ ವರಿಷ್ಠರು ಮುಂದೂಡುವುದು ಸರಿಯಲ್ಲ ಅಂತ ಹೇಳಿದ ಕಾರಣ ಪಾದಯಾತ್ರೆಗೆ ನಾವು ಒಪ್ಪಿದ್ದೇವೆ. ರಾಜ್ಯದ ಜನರ ಪರವಾಗಿ ಈ ಪಾದಯಾತ್ರೆ ನಡೆಸುತ್ತಿದ್ದೇವೆ. ನಮ್ಮ ಪಾದಯಾತ್ರೆ ಡೈವರ್ಟ್ ಮಾಡಲು ಕಾಂಗ್ರೆಸ್ ನಿಂದ ಪರ್ಯಾಯ ಸಮಾವೇಶಗಳನ್ನ ಮಾಡುತ್ತಿದ್ದಾರೆ. ಇತಿಹಾಸದಲ್ಲೇ ಈ ರೀತಿಯ ಹಗರಣ ಯಾವತ್ತೂ ನಡೆದಿರಲಿಲ್ಲ.
ಸ್ವತಃ ಮುಖ್ಯಮಂತ್ರಿಗಳೇ 89ಕೋಟಿ ಹಗರಣ ನಡೆದಿದೆ ಎಂದು ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ರೀತಿ ಹಿಂದೆಂದೂ ನಡೆದಿರಲಿಲ್ಲ. ಆಗಾಗಿ ಸರ್ಕಾರವೇ ಇದಕ್ಕೆ ಹೊಣೆ. ಇದರ ವಿರುದ್ಧ ನಮ್ಮ ಹೋರಾಟ ಮಾಡುತ್ತೇವೆ ಎಂದು ಮೈಸೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಇನ್ನು ಇದೇ ಸಂದರ್ಭದಲ್ಲಿ ರಾಮನಗರದಲ್ಲಿ ಹೆಚ್ ಡಿಕೆ ಆಸ್ತಿ ಬಗ್ಗೆ ಡಿಸಿಎಂ ಹೇಳಿಕೆಗೆ ತಿರುಗೇಟು ನೀಡಿದರು. ರಾಮನಗರದಲ್ಲಿ ನಮ್ಮ ಆಸ್ತಿ ಎಷ್ಟಿದೆ ಇನ್ನೊಂದು ಜಗಜ್ಜಾಹೀರ. 1985ರಲ್ಲಿ ಕುಮಾರಸ್ವಾಮಿ ಕೇತಗನಹಳ್ಳಿ ಬಳಿ ಜಮೀನು ಖರೀದಿ ಮಾಡಿದ್ರು. ಸಿನಿಮಾ ವಿತರಣೆಯಲ್ಲಿ ಬಂದಿದ್ದ ಹಣದಲ್ಲಿ ಜಮೀನು ಖರೀದಿ ಮಾಡಿದ್ದೇವೆ. ಇದನ್ನ ಹೊರತು ಪಡಿಸಿ ರಾಮನಗರದಲ್ಲಿ ಇದನ್ನ ಹೊರತುಪಡಿಸಿ ಬೇರೆ ಯಾವುದೇ ಆಸ್ತಿ ಇಲ್ಲ ಎಂದು ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದರು. ಮೈತ್ರಿಗೆ ಜನರ ಬೆಂಬಲ ಸಿಕ್ಕಿದೆ. ಅದೇ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ನಮಗೆ ಹೆಚ್ಚು ಸ್ಥಾನ ನೀಡಿದ್ದಾರೆ. ಇದನ್ನ ಅರ್ಥ ಮಾಡಿಕೊಂಡರೆ ಸಾಕು.ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಮೈತ್ರಿ ಹೋರಾಟ ನಿರಂತರ ವಾಗಿರುತ್ತದೆ.ಎಂದು ಮೈಸೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇಷ್ಟು ದಿನ ಕಾಂಗ್ರೆಸ್ ನವರು ಯಾಕೆ ಸುಮ್ಮನಿದ್ದರು. 2013ರಿಂದ 2018ರ ತನಕ ಕಾಂಗ್ರೆಸ್ ನವರೇ ಅಧಿಕಾರದಲ್ಲಿದ್ದರು. ಆಗ ಯಾಕೆ ಈ ಬಗ್ಗೆ ತನಿಖೆ ನಡೆಸಲಿಲ್ಲ. ಈಗ ಕಾಂಗ್ರೆಸ್ ಭ್ರಷ್ಟಚಾರದ ವಿಷಯವನ್ನ ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಮೈಸೂರಿನಲ್ಲಿ ಟಾಂಗ್ ಕೊಟ್ಟರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಗೌಡ ದಂಪತಿಗಳು, ಮಾಜಿ ಶಾಸಕ ಅಶ್ವಿನ್ ಕುಮಾರ್, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರಾದ ಪ್ರಸನ್ನ, ಮನ್ಮುಲ್ ಮಾಜಿ ಅಧ್ಯಕ್ಷರಾದ ರಾಮಚಂದ್ರು ಸೇರಿದಂತೆ ಪ್ರಮುಖರು ಜೊತೆಯಲ್ಲಿದ್ದರು.
