ಬೆಂಗಳೂರು: ವಿದ್ವತ್ ವಲಯದಲ್ಲಿರುವ ಸಾಹಿತ್ಯ ಅಕಾಡೆಮಿಯನ್ನು ಶ್ರೀಸಾಮಾನ್ಯರ ಕಡೆಗೆ ಕೊಂಡೊಯ್ಯುವುದು ನಮ್ಮ ಉದ್ದೇಶವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರು ತಿಳಿಸಿದರು.

ಕನ್ನಡ ಭವನದ ಸಭಾಂಗಣದಲ್ಲಿಂದು ತಿಳಿ ಬೆಳಕು ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಔಪಚಾರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಂಪ, ಕುಮಾರವ್ಯಾಸನ ವಿಚಾರಧಾರೆಗಳನ್ನು ಸಾಮಾನ್ಯ ನಾಗರಿಕರಿಗೂ ತಿಳಿಸುವುದು ಅವಶ್ಯವಾಗಿದೆ. ಹಾಗಾಗಿ ಶಾಲಾ-ಕಾಲೇಜುಗಳಲ್ಲದೆ ಸಂತೆ, ಜಾತ್ರೆಗಳಲ್ಲಿಯೂ ಈ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.

ಕುವೆಂಪು ಪ್ರಚಾರೋಪನ್ಯಾಸ ಮಾಲಿಕೆ ಮಾದರಿಯಲ್ಲಿ ಇತಿಹಾಸ, ಸಾಹಿತ್ಯ, ಕೃಷಿ, ಸಮಾಜ ಸೇವೆ ಇತ್ಯಾದಿ ಕ್ಷೇತ್ರಗಳ ಸಾಧಕರ ಸ್ಪೂರ್ತಿದಾಯಕ ವ್ಯಕ್ತಿತ್ವಗಳನ್ನು ಪರಿಚಯಿಸುವ ಕಿರು ಹೊತ್ತಿಗೆಗಳನ್ನು ಪ್ರಕಟಿಸಿ ಯುವಜನತೆಗೆ, ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುವಂತೆ ಹಂಚಿಕೆ ಮಾಡುವ ಮೂಲಕ ಯುವಜನರಲ್ಲಿ ಚೈತನ್ಯ ತುಂಬುವುದು ಅಕಾಡೆಮಿಯ ಉದ್ದೇಶವಾಗಿದೆ ಎಂದು ವಿವರಿಸಿದರು.

ವಿಜ್ಞಾನ, ತಂತ್ರಜ್ಞಾನ, ವೈಚಾರಿಕ ಮತ್ತು ಜಾತ್ಯತೀತ ಪ್ರಜ್ಞೆಯನ್ನು ತಿಳಿಸುವ ಹೊಸ ಮಾದರಿಯ ಕಾವ್ಯಕಮ್ಮಟಗಳನ್ನು ಹಮ್ಮಿಕೊಳ್ಳಲಾಗುವುದು. ಸಂಘ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಇದೇ ಮಾದರಿ ಕಾರ್ಯಾಗಾರ ನಡೆಸುವ ಸಂಸ್ಥೆಗಳಿಗೆ ಆರ್ಥಿಕ ಮತ್ತು ವಿದ್ವತ್ತಿನ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದರು.

ತಿಳಿ ಬೆಳಕು ಟ್ರಸ್ಟ್ ನ ರಾಜ್ಯಾಧ್ಯಕ್ಷರಾದ ಗೊರೂರು ಪಂಕಜ, ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ಶುಭಾ ಧನಂಜಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್, ಸಾಹಿತ್ಯ ಅಕಾಡೆಮಿ ಸದಸ್ಯರಾದ ಸಿದ್ದರಾಮ ಹೊನ್ಕಲ್, ನಿವೃತ್ತ ಪ್ರಾಂಶುಪಾಲರಾದ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *