ಬೆಂಗಳೂರು: ಹಾವೇರಿ ಜಿಲ್ಲೆಗೆ ಅವಶ್ಯವಿರುವ ಗೊಬ್ಬರವನ್ನು ಪೂರೈಸಲು ಅಗತ್ಯ ಕ್ರಮ ವಹಿಸುವಂತೆ ಕೃಷಿ ಇಲಾಖೆಯ ಆಯುಕ್ತರಿಗೆ ಸೂಚನೆಗಳನ್ನು ನೀಡಿರುವುದಾಗಿ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಅವರು ಮಾಜಿ ಸಿಎಂ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಸಿದ್ದಾರೆ.

ಇತ್ತೀಚೆಗೆ ಬೀಳುತ್ತಿರುವ ಮುಂಗಾರು ಮಳೆಯಿಂದ ರೈತರು ಉತ್ಸುಕರಾಗಿ ಬಿತ್ತನೆ ಮಾಡಲು ಸಿದ್ದರಾಗಿದ್ದು, ಅದಕ್ಕಾಗಿ ಗೊಬ್ಬರ ಪಡೆದುಕೊಳ್ಳಲು ಮುಂದೆ ಬಂದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯಲ್ಲಿ ಗೊಬ್ಬರ ಕಡಿಮೆ ಇದ್ದು, ನೂಕು-ನುಗ್ಗಲು ಪರಿಸ್ಥಿತಿ ಉಂಟಾಗಿರುವುದಾಗಿ, ಹಾವೇರಿ ಜಿಲ್ಲೆಗೆ ಸುಮಾರು 35,000 ಮೆಟ್ರಿಕ್ ಟನ್ ಮುಂಗಾರು ಹಂಗಾಮಿನಲ್ಲಿ ಡಿ.ಎ.ಪಿ.ಗೊಬ್ಬರ ಅವಶ್ಯಕತೆ ಇದ್ದು, ಕೇವಲ 6.500 ಮೆಟ್ರಿಕ್ ಟನ್ ಮಾತ್ರ ಸರಬರಾಜಾಗಿರುವುದರಿಂದ ಬಾಕಿ ಇರುವ 29,000 ಮೆಟ್ರಿಕ್ ಟನ್ ಗೊಬ್ಬರವನ್ನು ಹಾವೇರಿ ಜಿಲ್ಲೆಗೆ ಸರಬರಾಜು ಮಾಡುವಂತೆ ಹಾಗೂ ಇದೇ ರೀತಿ ಯೂರಿಯಾ 65000 ಮೆಟ್ರಿಕ್ ಟನ್ ಮತ್ತು ಕಾಂಪ್ಲೆಕ್ಸ್ 38000 ಮೆಟ್ರಿಕ್ ಟನ್ ಸಹ ಸರಬರಾಜು ಮಾಡಲು ಕ್ರಮ ಜರುಗಿಸುವಂತೆ ಜುಲೈ 22 ರಂದು ಮಾಜಿ ಸಿಎಂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಕೃಷಿ ಸಚಿವರಿಗೆ ಪತ್ರ ಬರೆದು ಸಚಿವರ ಗಮನ ಸೆಳೆದಿದ್ದರು.

ಬಸವರಾಜ ಬೊಮ್ಮಾಯಿಯವರ ಪತ್ರಕ್ಕೆ ಸ್ಪಂದಿಸಿರುವ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ, ಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡಿರುವ ಬಗ್ಗೆ ಪತ್ರದ ಮೂಲಕ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *