ನವದೆಹಲಿ : ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರ ಪ್ರಕಾರ ಈ ಬಾರಿಯ ಲೋಕಸಭಾ ಚುನಾವಣೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ನಾಶಪಡಿಸಲು ಹೊರಟವರು ಮತ್ತು ಉಳಿಸಲು ಹೊರಟವರ ನಡುವಿನ ಹೋರಾಟ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಈ ಹೋರಾಟ ಮಾಧ್ಯಮಗಳು ಹೇಳುತ್ತಿರುವಂತೆ ಇಲ್ಲ. ಈ ಹೋರಾಟ ಹೆಚ್ಚು ನಿಕಟವಾಗಿದೆ ಎಂದರು.
ಈ ದೇಶದ ಚುನಾವಣಾ ಇತಿಹಾಸವನ್ನು ನೆನಪಿಸಿದ ಅವರು 2004 ರಲ್ಲಿ ಬಿಜೆಪಿ ಶೈನಿಂಗ್ ಇಂಡಿಯಾ ಪ್ರಚಾರ ಮಾಡಿತು. ಆದರೆ ನಂತರ ಫಲಿತಾಂಶ ಏನಾಯಿತು ಎಂಬುದು ನಮಗೆ ಗೊತ್ತು. ಯಾರು ಗೆದ್ದರು ಎಂಬುದನ್ನು ನೆನಪಿಸಿಕೊಳ್ಳಿ ಎಂದರು.
ನಮ್ಮ ಇಂಡಿಯಾ ಮೈತ್ರಿಕೂಟ ಈ ಚುನಾವಣೆಯನ್ನು ಸೈದ್ದಾಂತಿಕ ಆಧಾರದ ಮೇಲೆ ಎದುರಿಸುತ್ತಿದೆ. ನಾವು ಸಂವಿಧಾನ ಮತ್ತು ಜನತಂತ್ರವನ್ನು ಉಳಿಸಬೇಕಾಗಿದೆ, ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಯಾರು ಪ್ರಧಾನಿಯಾಗಬೇಕು ಎಂಬುದು ಮುಂದಿನ ವಿಚಾರ. ಫಲಿತಾಂಶ ಬಂದ ಮೇಲೆ ನಾವು ನಿರ್ಧರಿಸುತ್ತೇವೆ ಎಂದು ಅವರು ಹೇಳಿದರು.
ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರು ಪಾಲ್ಗೊಂಡಿದ್ದರು.
