ನವದೆಹಲಿ : ಚುನಾವಣಾ ದಿನ ಹತ್ತಿರ ಬರುತ್ತಿರುವ ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದ ವರಸೆ ಬದಲಾಗುತ್ತಿದೆ. ಅಭಿವೃದ್ಧಿ ಆರ್ಥಿಕತೆ ವಿಚಾರವನ್ನು ಕೈಬಿಟ್ಟು ಹಿಂದೂ ಮತ ಬ್ಯಾಂಕ್ ಗೆ ಮತ್ತೆ ಕೈ ಹಾಕಿದ್ದಾರೆ, ಮುಸ್ಲೀಂ ಜನ ಸಮುದಾಯವನ್ನು ಗುರಿಯಾಗಿಸಿ ಭಾಷಣ ಮಾಡುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದರೆ ದೇಶದ ಸಂಪತ್ತನ್ನು ಮುಸ್ಲಿಂ ರಿಗೆ ಹಂಚಲಾಗುತ್ತದೆ ಎಂದು ಅವರು ಆರೋಪಿಸಿದ್ದರು. ಈಗ ಮಂಗಲ ಸೂತ್ರದ ಬಗ್ಗೆ ಮಾತನಾಡತೊಡಗಿದ್ದಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳ ಸೂತ್ರವನ್ನು ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ ಎಂದು ಜನರನ್ನು ಎತ್ತಿ ಕಟ್ಟುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ.
ಎಪ್ಪತ್ತು ವರ್ಷ ಈ ದೇಶವನ್ನು ಆಳಿದ ಪಕ್ಷ ಮಹಿಳೆಯರ ಮಂಗಳ ಸೂತ್ರವನ್ನು ಕಿತ್ತುಕೊಂಡಿದೆಯೆ ? ಆಗ ಬಿಜೆಪಿ ಎಲ್ಲಿತ್ತು ? ಬಿಜೆಪಿ ನಾಯಕರು ಬಂದು ಹಿಂದೂ ಮಹಿಳೆಯರಿಗೆ ಮಂಗಲ ಸೂತ್ರವನ್ನು ವಾಪಸ್ ಕೊಡಿಸಿದರೆ ? ಈ ಪ್ರಶ್ನೆಯನ್ನು ಕೇಳುವವರು ಯಾರು ? ಸಾಮಾನ್ಯ ಜನರಿಗೆ ಮೋದಿಯವರನ್ನು ಪ್ರಶ್ನಿಸುವ ಧೈರ್ಯ ಇಲ್ಲ.
ಚುನಾವಣಾ ಆಯೋಗ ಕೂಡ ರಾಮ ಜಪದಲ್ಲಿ ಕುಳಿತಿದೆ. ಧಾರ್ಮಿಕ ನಂಬಿಕೆಯನ್ನು ಚುನಾವಣೆಗೆ ಬಳಸಿಕೊಳ್ಳುವಂತಿಲ್ಲ. ಆದರೆ ಬಳಸಿಕೊಳ್ಳಲಾಗುತ್ತಿದೆ. ಧರ್ಮ ದ್ವೇಷವನ್ನು ಬಿತ್ತುವಂತಿಲ್ಲ. ಆದರೆ ಬಿತ್ತಲಾಗುತ್ತಿದೆ.
ಇದನ್ನೆಲ್ಲ ನೋಡುತ್ತ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ.