ಬೆಂಗಳೂರು: ಆರು ಮಂದಿ ನಕ್ಸಲೀಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಿ, ಸಮಾಜದ ಮುಖ್ಯವಾಹಿನಿಗೆ ಹಿಂದಿರುಗಿ ಬಂದಿರುವುದರಿಂದ ಒಳ್ಳೆಯ ಸಂದೇಶ ರವಾನೆಯಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಹೇಳಿದ್ದಾರೆ.

ಗುರುವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶರಣಾದ ನಕ್ಸಲೀಯರಿಗೆ ಪರಿಹಾರ ಪ್ಯಾಕೇಜ್ ಕೊಡುವುದರಲ್ಲಿ ತಪ್ಪೇನೂ ಇಲ್ಲ. ಬಿಜೆಪಿ ಸರಕಾರ ಇದ್ದರೂ ಇದನ್ನೇ ಮಾಡುತ್ತಿತ್ತು. ಇದು ಕೇಂದ್ರ ಸರ್ಕಾರದ ನೀತಿ ಕೂಡ ಇದೆ. ಇದರಲ್ಲೆಲ್ಲ ರಾಜಕೀಯ ಮಾಡಲು ಹೋಗಬಾರದು ಎಂದಿದ್ದಾರೆ.

ಬಿಜೆಪಿ ಎಲ್ಲದರಲ್ಲೂ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ. ಯುಜಿಸಿ ನಿಯಾಮವಳಿಗಳಿಗೆ ತರಲು ಹೊರಟಿರುವ ಬದಲಾವಣೆಯಲ್ಲೂ ಇದೇ ಅಜೆಂಡಾ ಇದೆ. ಗುಜರಾತಿನಲ್ಲಿ ಕುಲಪತಿಗಳ ನೇಮಕಾತಿ ಅಧಿಕಾರ ಮುಖ್ಯಮಂತ್ರಿಯ ಬಳಿಯೇ ಇದೆ. ಬೇರೆ ರಾಜ್ಯಗಳಲ್ಲಿ‌ ಮಾತ್ರ ಇದನ್ನು ವಿರೋಧಿಸುವುದರಲ್ಲಿ ಯಾವ ಅರ್ಥವಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯ ಕಾಂಗ್ರೆಸ್ಸಿ‌ನಲ್ಲಿ ಯಾವ ಸಮಸ್ಯೆಯೂ ಇಲ್ಲ. ಬೆಳಗಾವಿಯ ಜೈ ಸಂವಿಧಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿದೆ ಅಷ್ಟೆ. ನಮ್ಮಲ್ಲಿ ಅಹಿಂದ ವರ್ಸಸ್ ಮೇಲ್ಜಾತಿ ತಿಕ್ಕಾಟವೇನೂ ಇಲ್ಲ ಎಂದು ಅವರು ಹೇಳಿದ್ದಾರೆ.

ಪಕ್ಷದ ಕೆಲ ಶಾಸಕರು ಸೇರಿಕೊಂಡು ಔತಣ ಮಾಡಿದ್ದರಲ್ಲಿ ತಪ್ಪೇನೂ ಇಲ್ಲ. ಸಚಿವರಾದ ಈಶ್ವರ ಖಂಡ್ರೆ ಅವರಾಗಲಿ, ನಾನಾಗಲಿ ಯಾರನ್ನೂ ಔತಣಕ್ಕೆ ಕರೆದಿಲ್ಲ. ಲಿಂಗಾಯತ ಶಾಸಕರ ಸಭೆಯನ್ನೂ ನಾವ್ಯಾರೂ ಕರೆದಿಲ್ಲ. ಡಿನ್ನರ್ ಪಾರ್ಟಿ ಬಗ್ಗೆ ಹೆಚ್ಚು ಮಾತನಾಡುವುದು ಅನಗತ್ಯ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.

Author

Leave a Reply

Your email address will not be published. Required fields are marked *