ಬೆಂಗಳೂರು : ಚುನಾವಣೆ ಬಂತು ಎಂದರೆ ಈ ಜ್ಯೋತಿಷಿಗಳಿಗೆ ಅಪಾರ ಬೇಡಿಕೆ. ರಾಜಕಾರಣಿಗಳು ಇವರ ಬಳಿ ಬರುತ್ತಾರೆ. ರಾಶಿ ಕುಂಡಲಿ ಬಗ್ಗೆ ಕೇಳುತ್ತಾರೆ. ಯಾವ ಯಾವ ಗೃಹಗಳು ಎಲ್ಲಿವೆ ಎತ್ತ ಸುತ್ತುತ್ತಿವೆ ಎಂಬ ವಿವರಗಳನ್ನು ಪಡೆಯುತ್ತಾರೆ. ಗೃಹಗತಿ ಸರಿಯಾಗಲು ಏನು ಮಾಡಬೇಕು ಎಂದು ಕೇಳಿ ಅದರಂತೆ ನಡೆದುಕೊಳ್ಳುತ್ತಾರೆ.
ಇದೇ ಜ್ಯೋತಿಷಿಗಳು ಯಾವಾಗ ನಾಮ ಪತ್ರ ಸಲ್ಲಿಸಬೇಕು, ಯಾವಾಗ ಎಲ್ಲಿ ಪ್ರಚಾರ ಮಾಡಬೇಕು ಎಂಬ ವಿವರ ನೀಡುತ್ತಾರೆ. ಯಾವ ಬಣ್ಣದ ಬಟ್ಟೆ ಧರಿಸಬೇಕು ಎಂಬ ವಿವರಗಳನ್ನು ನೀಡುತ್ತಾರೆ. ಇದಾದ ಮೇಲೆ ಗೆಲ್ಲುವವರು ಗೆಲ್ಲುತ್ತಾರೆ ಸೋಲುವವರು ಸೋಲುತ್ತಾರೆ. ಸೋತ ಮೇಲೆ ಇದೇ ಜ್ಯೋತಿಷಿಗಳ ಬಳಿ ಹೋಗುವ ರಾಜಕಾರಣಿಗಳು ಸೋಲಿಗೆ ಕಾರಣ ಕೇಳುತ್ತಾರೆ. ಅವರು ಮತ್ತೆ ಗೃಹಗತಿಯ ಸಮಸ್ಯೆಯನ್ನು ವಿವರಿಸುತ್ತಾರೆ.
ಜ್ಯೋತಿಷಿಗಳ ಕಥೆ ಒಂದೆಡೆಯಾದರೆ ಮಠಾಧೀಶರು ಇನ್ನೊಂದು ಕಡೆ. ಬಲಿಷ್ಠ ಜಾತಿಗಳ ಮಠಾಧೀಶರಿಗೆ ಹೆಚ್ಚಿನ ಬೆಲೆ. ಜನಸಂಖ್ಯೆ ಹೆಚ್ಚಿರದ ಜಾತಿಗಳ ಸ್ವಾಮಿಗಳಿಗೆ ಅಂತಹ ಬೇಡಿಕೆ ಇರೋದಿಲ್ಲ. ಇವರ ನಡುವೆ ಸ್ವಯಂ ಘೋಷಿತ ಸ್ವಾಮಿಗಳ ಇನ್ನೊಂದು ಪಡೆ ಇದೆ. ಇವರಿಗೆ ಮಠ ಇರಲಿ ಬಿಡಲಿ ಮಾಧ್ಯಮ ಇದ್ದರೆ ಸಾಕು. ಒಂದು ಹೇಳಿಕೆ ನೀಡಿ ಪ್ರಸಿದ್ಧರಾಗಿಬಿಡುತ್ತಾರೆ. ಅವರು ಬಯಸಿದ ಕೆಲಸವು ಆಗುತ್ತದೆ.
ಇಂತಹ ಸ್ವಾಮಿಗಳಲ್ಲಿ ಪ್ರಸಿದ್ದರು ಈ ಕಾಳಿ ಸ್ವಾಮಿ ಅಥವಾ ಕೋಳಿ ಸ್ವಾಮಿ ಅಥವಾ ಋಷಿಕುಮಾರ ಸ್ವಾಮಿ.
ಇವರು ಮಹಾ ಪ್ರಚಂಡರು. ತಿಪಟೂರು ಅರಸಿಕೆರೆ ಕಡೆ ನೃತ್ಯ ಕಲಿಸುತ್ತಿದ್ದ ನೃತ್ಯ ಗುರು ಸ್ವಾಮೀಜಿ ಆದದ್ದೇ ದೊಡ್ಡ ಕಥೆ. ಅದು ಈಗ ಬೇಡ. ಅವರು ಈಗ ಶಿವಮೊಗ್ಗ ರಾಜಕಾರಣದ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ.
ಅವರ ಪ್ರಕಾರ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಭೀಷ್ಮರಂತೆ. ಯಡಿಯೂರಪ್ಪನವರ ಮಗ ರಾಘವೇಂದ್ರ ಅರ್ಜುನನಂತೆ. ಅವರ ರಥದ ಮೇಲೆ ಕೃಷ್ಣ ಯಾರು ಗೊತ್ತಾ ? ಕೋಳಿ ಸ್ವಾಮಿಯ ಪ್ರಕಾರ ಅವರೇ ಪ್ರಧಾನಿ ನರೇಂದ್ರ ಮೋದಿ. ಈ ಕೃಷ್ಣನ ಭಾವ ಚಿತ್ರ ಭೀಷ್ಮ ರ ಜೊತೆ ಇದೆ… ಹೇಗಿದೆ ಕೋಳಿ ಸ್ವಾಮಿ ಹರೀಕಥೆ..?
