ತಮ್ಮ ರಾಜಕೀಯ ಭವಿಷ್ಯ ಕುರಿತು ಘೋಷಿಸಬೇಕಾಗಿದ್ದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ತಮ್ಮ ನಿರ್ಧಾರವನ್ನು ಬುಧವಾರ ಪ್ರಕಟಿಸಲಿದ್ದಾರೆ. ನಿನ್ನೆ ಅವರು ಹೇಳಿದ ಪ್ರಕಾರ ಅವರು ಇಂದು ಪತ್ರಿಕಾಗೋಷ್ಟಿ ಕರೆದು ತಮ್ಮ ನಿರ್ಧಾರವನ್ನು ಪ್ರಕಟಿಸಬೇಕಿತ್ತು. ಆದರೆ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಲು ಇನ್ನೊಂದು ದಿನ ತೆಗೆದುಕೊಂಡರು.
ಇಂದು ಅವರು ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಅವರ ಅಭಿಪ್ರಾಯವನ್ನು ಪಡೆದರು. ರಾಜ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಂದಲೂ ಒಕ್ಕಲಿಗರಿಗೆ ಅನ್ಯಾಯವಾಗಿದೆ. ಬಿಜೆಪಿ ಲಿಂಗಾಯಿತರಿಗೆ ೮ ಸೀಟು ನೀಡಿದರೆ, ಒಕ್ಕಲಿಗರಿಗೆ ನೀಡಿದ್ದು ಎರಡು ಕ್ಷೇತ್ರಗಳನ್ನು ಮಾತ್ರ ಎಂದು ಸಂಘದ ಪದಾಧಿಕಾರಿಗಳು ಅಭಿಪ್ರಾಯ ಪಟ್ಟರು ಎಂದು ಹೇಳಲಾಗಿದೆ.
ಜೊತೆಗೆ ಸದಾನಂದ ಗೌಡರು ಯಾವುದೇ ತೀರ್ಮಾನ ತೆಗೆದುಕೊಂಡರೂ ಒಕ್ಕಲಿಗರ ಸಂಘ ಅವರನ್ನು ಬೆಂಬಲಿಸುತ್ತದೆ ಎಂಬ ಭರವಸೆ ಕೂಡ ಸದಾನಂದ ಗೌಡರಿಗೆ ದೊರಕಿದೆ.
ಈ ನಡುವೆ ತಮ್ಮ ಬೆಂಬಲಿಗರು ಮತ್ತು ಹಿತೈಷಿಗಳ ಜೊತೆಗೂ ಅವರು ಮಾತುಕತೆ ನಡೆಸಿದ್ದಾರೆ. ದೆಹಲಿಯ ಕೆಲವು ಬಿಜೆಪಿ ನಾಯಕರೂ ಸದಾನಂದ ಗೌಡರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು ಎಂದೂ ತಿಳಿದು ಬಂದಿದೆ.
