ಮಂಗಳೂರಿನಲ್ಲಿ ಕಂಪೆನಿ ಎಳೆನೀರು ಕುಡಿದು 137 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು : ಹುಷಾರು ಮರದಿಂದ ಇಳಿಸಿದ ತಾಜಾ ಎಳನೀರು ಮಾತ್ರ ಕುಡೀರಿ ಮಾರಾಯರೆ…!

Tender Coconut;ಎಪ್ರಿಲ್ 8ರಂದು ಬೊಂಡ ಫ್ಯಾಕ್ಟರಿ ಎಳನೀರು ಖರೀದಿಸಿದ ಕಣ್ಣೂರು ಮತ್ತು ತುಂಬೆ ನಿವಾಸಿಗಳು ಮರುದಿನ ಬೆಳಿಗ್ಗೆ ವಾಂತಿ-ಭೇದಿಯಾಗಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಪ್ರತಿ ಲೀಟರ್‌ಗೆ 40 ರೂ. ಬೆಲೆಯಿದ್ದು, ಬಿಸಿಲಿನ ತಾಪ ತಾಳಿಕೊಳ್ಳಲು ಈ ಭಾಗದ ಹಲವರು ಎಳನೀರು ಕುಡಿಯುತ್ತಿದ್ದರು

ಮಂಗಳೂರು :ಈ ಬಿಸಿಲು ಬೇಗೆ. ನೀರು ಸಿಕ್ಕರೆ ಸಾಕು ಎಂಬ ಸ್ಥಿತಿ. ಕೆಲವೊಮ್ಮೆ ಎಳನೀರು, ಐಸ್ ಕ್ರೀಮ್ ದೇಹವನ್ನು ತಂಪಾಗಿರಿಸುವುದು ನಿಜ. ಎಳೆ ನೀರು ಕುಡಿಯಬೇಕು ಅನ್ನಿಸಿದಾಗ ಒಡೆಸಿ ಫ್ರೆಷ್ ಆಗಿ ಕುಡಿಯುವುದು ಒಳ್ಳೆಯದು. ಇದನ್ನು ಹೇಳುವುದಕ್ಕೆ ಕಾರಣ ಮಂಗಳೂರಿನಲ್ಲಿ ಇಂದು ನಡೆದ ಘಟನೆ.

ಈ ಘಟನೆಯಲ್ಲಿ ಅಸ್ವಸ್ಥರಾದವರು 137 ಮಂದಿ. ಇವರಲ್ಲಿ 84 ಜನರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 53 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಯಾರಿಕೆ ಅವರ ಜೀವವನ್ನೇ ಕಸಿದುಕೊಳ್ಳುವ ಸ್ಥಿತಿ ಬಂದಿತ್ತು.

ಈ ಘಟನೆಯ ವಿವರ ಹೀಗಿದೆ :

ಮಂಗಳೂರು ಬಿಸಿಲ ಬೇಗೆಗೆ ಹೆಸರು ವಾಸಿ. ಬೇಸಿಗೆಯಲ್ಲಿ ಇಲ್ಲಿ ಹೊರ ಬರುವುದೇ ಕಷ್ಟ. ಹೀಗಾಗಿ ಜನರ ಬಾಯರಿಕೆ ತಣಿಸುವ ಅಂಗಡಿಗಳು ಇಲ್ಲಿವೆ. ಐಸ್ ಕ್ರೀಂ ಜೊತೆಗೆ ವಿವಿಧ ಪಾನೀಯಗಳು ಯಥೇಚ್ಚವಾಗಿ ಮಾರಾಟವಾಗುತ್ತವೆ. ಹೀಗಾಗಿ ತಂಪು ಪಾನೀಯದ ಅತಿ ಹೆಚ್ಚು ಅಂಗಡಿಗಳನ್ನು ಮಂಗಳೂರಿನಲ್ಲಿ ನೋಡಬಹುದು ಅಡ್ಯಾರ್‌ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಂ ಮಾರಾಟ ಸಂಸ್ಥೆಯಾದ ಬೊಂಡ ಫ್ಯಾಕ್ಟರಿ ಯು ಇವುಗಳಲ್ಲಿ ಒಂದು. ಇದು ಜನಪ್ರಿಯ ಅಂಗಡಿ ಕೂಡ ಹೌದು.

ನಿನ್ನೆ ಬಿಸಿಲ ಬೇಗೆಗೆ ದೇಹವನ್ನು ತಂಪು ಮಾಡಿಕೊಳ್ಳಲು ಜನ ಬಂದರು. ಎಳನೀರು ಕುಡಿದರು. ಎಳನೀರು ಕುಡಿದವರು ವಾಂತಿ ಮಾಡಿಕೊಂಡು ಆಸ್ಪತ್ರೆ ಸೇರಿದರು. ಹೀಗೆ ಎಳನೀರು ಸೇವಿಸಿ 137 ಜನರು ಅಸ್ವಸ್ಥರಾದರು. ಈ ಹಿನ್ನೆಲೆಯಲ್ಲಿ ಫ್ಯಾಕ್ಟರಿಯನ್ನು ಬಂದ್ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ ಆದೇಶಿಸಿದ್ದಾರೆ.

ಎಪ್ರಿಲ್ 8 ರಂದು ಬೊಂಡ ಫ್ಯಾಕ್ಟರಿ ಎಳನೀರು ಖರೀದಿಸಿದ ಕಣ್ಣೂರು ಮತ್ತು ತುಂಬೆ ನಿವಾಸಿಗಳು ಮರುದಿನ ಬೆಳಿಗ್ಗೆ ವಾಂತಿ-ಭೇದಿಯಾಗಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಪ್ರತಿ ಲೀಟರ್‌ಗೆ 40 ರೂ. ಬೆಲೆಯಿದ್ದು, ಬಿಸಿಲಿನ ತಾಪ ತಾಳಿಕೊಳ್ಳಲು ಈ ಭಾಗದ ಹಲವರು ಎಳನೀರು ಕುಡಿಯುತ್ತಿದ್ದರು ಎಂದು ಹೇಳಲಾಗುತ್ತಿದೆ.

ಸುಮಾರು 23 ರೋಗಿಗಳನ್ನು ಡಿಸ್ಚಾರ್ಜ್ ಮಾಡಲಾಗಿದೆ. ಎಲ್ಲಾ ರೋಗಿಗಳ ಆರೋಗ್ಯ ಸ್ಥಿರವಾಗಿದೆ. ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Author

error: