ಮೈಸೂರು: ಲಿಂಗಾಯತ ಸಮುದಾಯವು ತನ್ನಲ್ಲಿರುವ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಎಂಬ ತಾರತಮ್ಯಗಳನ್ನು ಮರೆತು ಒಗ್ಗೂಡಿದರೆ ಮಾತ್ರ ಏಳಿಗೆ ಸಾಧ್ಯವಾಗಲಿದೆ. ಇದರ ಜೊತೆಗೆ ಸಮುದಾಯದ ಸದಸ್ಯರು ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಹೇಳಿದ್ದಾರೆ.

ಇಂಟರ್ನ್ಯಾಷನಲ್ ಲಿಂಗಾಯತ ಯೂತ್ ಫೋರಂ ಇಲ್ಲಿ ಏರ್ಪಡಿಸಿರುವ 13ನೇ ವರ್ಷದ ಉದ್ಯಮ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.

ಲಿಂಗಾಯತ ಸಮುದಾಯ ರಾಜ್ಯದ ಉದ್ದಕ್ಕೂ ಇದೆ. ಆದರೆ ನಮ್ಮಲ್ಲಿ ಅಖಂಡತೆಯ ಪ್ರಜ್ಞೆ ಇಲ್ಲ. ಇದು ದೊಡ್ಡ ಸಮಸ್ಯೆಯಾಗಿದೆ. ಸಮುದಾಯದ ಸದಸ್ಯರ ನಡುವೆ ಪರಸ್ಪರ ಸಂಪರ್ಕವನ್ನು ಬೆಳೆಸಬೇಕಾದ್ದು ಈಗಿನ ಜರೂರಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಲಿಂಗಾಯತ ಸಮುದಾಯವು ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿದೆ. ನಾವು ಈ ಸಮಾಜಕ್ಕೆ ಕೊಡುತ್ತ ಬಂದಿರುವವರೇ ವಿನಾ ಬೇಡಿದವರಲ್ಲ. ಸಮುದಾಯದ ಮಠಮಾನ್ಯಗಳಲ್ಲಿ ಲಕ್ಷಾಂತರ ಜನರಿಗೆ ಊಟ ಮತ್ತು ವಸತಿಯ ದಾಸೋಹವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈಗ ಹೊರಳು ಹಾದಿಯಲ್ಲಿ ಇದ್ದೇವೆ ಎಂದು ಅವರು ನುಡಿದಿದ್ದಾರೆ.

ಸರ್ಕಾರವು ಹತ್ತಾರು ಉಪಯುಕ್ತ ಉಪಕ್ರಮಗಳಿರುವ ಕೈಗಾರಿಕಾ ನೀತಿಯನ್ನು ಹೊಂದಿದೆ. ರಾಜ್ಯದ ಪ್ರತಿಯೊಂದು ಭಾಗದಲ್ಲೂ ಬಗೆಬಗೆಯ ಉದ್ದಿಮೆಗಳು ನೆಲೆಯೂರಬೇಕು ಎಂಬ ಸದಾಶಯದಿಂದ ಹಲವು ಪ್ರೋತ್ಸಾಹಕ ಕ್ರಮಗಳನ್ನು ಅಳವಡಿಸಿ ಕೊಂಡಿದ್ದೇವೆ. ಲಿಂಗಾಯತ ಸಮುದಾಯ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಸುತ್ತೂರು ಮತ್ತು ಸಿದ್ಧಗಂಗಾ ಮಠಗಳು ಅಪಾರ ಕೆಲಸ ಮಾಡಿವೆ. ಉದ್ಯಮಶೀಲತೆಯ ಬೆಳವಣಿಗೆಗೂ ಈ ಮಠಗಳ ಶ್ರೀಗಳು ಮಾರ್ಗದರ್ಶನ ಮಾಡಬೇಕು ಎಂದು ಪಾಟೀಲ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಶಾಸಕ ಗಣೇಶ್ ಪ್ರಸಾದ್, ಮುಂತಾದವರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *