ಬೆಂಗಳೂರು : ಚುನಾವಣಾ ಪ್ರಚಾರಕ್ಕೆ ಬರುವಂತೆ ನನ್ನನ್ನು ಯಾರೂ ಕರೆದಿಲ್ಲ. ಕರೆದಿದ್ದರೆ ಮಂಡ್ಯಕ್ಕೂ ಹೋಗುತ್ತಿದ್ದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಇಂದು ಮಂದ್ಯದಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಆವರು ಕುಮಾರಸ್ವಾಮಿ ಅವರು ನನ್ನ ಮನೆಗೆ ಬಂದು ಹೋದ ಮೇಲೆ ನನ್ನ ಜೊತೆ ಮಾತನಾಡಿಲ್ಲ. ನಾನ ಮೈಸೂರಿಗೆ ಪ್ರಧಾನಿ ಕಾರ್ಯಕ್ರಮಕ್ಕೆ ಹೋದಾಗ ಈ ಬಗ್ಗೆ ಆರ್ .ಅಶೋಕ್ ಅವರ ಜೊತೆ ಮಾತನಾಡಿದೆ. ಸಮಯ ನಿಗದಿಯಾದ ಮೇಲೆ ತಿಳಿಸುವುದಾಗಿ ಹೇಳಿದರು. ಆದರೆ ನನಗೆ ಯಾವ ಮಾಹಿತಿಯೂ ಬಂದಿಲ್ಲ ಎಂದು ಹೇಳಿದರು.
ಸ್ವತಂತ್ರ ಸಂಸದೆಯಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದೀನಿ. ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾನು ಗೆದ್ದಂತಹ ಕ್ಷೇತ್ರ ತ್ಯಾಗ ಮಾಡಿದ್ದೀನಿ. ಈ ಹಂತದಲ್ಲಿ ಅಂಬರೀಶ್ ಅವರ ಪಡೆಯ ಶಕ್ತಿಯನ್ನು ಎನ್ಡಿಎಗೆ ಕೊಟ್ಟಿದ್ದೇವೆ. ನಾವು ನಿಷ್ಠೆಯಿಂದ ಕೆಲಸ ಮಾಡಿದ್ದೇವೆ ಎಂದು ಸಂಸದೆ ಹೇಳಿದರು.
ಚುನಾವಣೆಯಲ್ಲಿ ಸಹಕರಿಸಿಲ್ಲ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆಯನ್ನು ಅವರು ನೀಡಿದರು. ದೇವೆಗೌಡರು ದೊಡ್ಡವರು, ಅವರಿಗೆ ಸರಿಯಾದ ಮಾಹಿತಿ ಕೊಡದೆ ಆ ರೀತಿ ಹೇಳಿದ್ದಾರೆ. ಅವರಿಂದ ಅಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.
ಈ ದಿನದವರೆಗೂ ಜೆಡಿಎಸ್ನ ಯಾವ ನಾಯಕರು ಯಾವುದೇ ಸಭೆಗೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೇ ಇದ್ದರೆ ತಪ್ಪಾಗುತ್ತದೆ. ಆದರೆ ಅವರು ನನ್ನ ಕರೆದಿಲ್ಲ, ನಾನಿಲ್ಲದೇ ಅವರು ಚುನಾವಣೆ ಮಾಡಿಕೊಳ್ಳುತ್ತೀವಿ ಎಂಬ ಭಾವನೆ ಇರಬಹುದು ಎಂದು ದಳಪತಿಗಳಿಗೆ ಸುಮಲತಾ ಅಂಬರೀಶ್ ಟಾಂಗ್ ಕೊಟ್ಟರು.
ದೇವೇಗೌಡರು ಹೇಳಿಕೆ ನೀಡಿದ ನಂತರ ನಿನ್ನೆಯಿಂದ ನನಗೆ ಒಂದಷ್ಟು ಕರೆ ಬಂದಿವೆ. ನನ್ನನ್ನು ಯಾವುದೇ ಪ್ರಚಾರಕ್ಕೆ ಕರೆದಿಲ್ಲ. ಕುಮಾರಸ್ವಾಮಿ ನಮ್ಮ ಮನೆಗೆ ಬಂದು ಹೋದ ನಂತರ ನನಗೆ ಒಂದು ಕರೆ ಮಾಡಿ ಪ್ರಚಾರಕ್ಕೆ ಬನ್ನಿ ಎಂದು ಕೇಳಿಲ್ಲ. ಇಷ್ಟು ತ್ಯಾಗ ಮಾಡಿಯೂ ನನ್ನ ಕರೆಯಲಿಲ್ಲ ಅನ್ನೋದು ನನಗೆ ಬೇಸರವಾಯ್ತು ಎಂದು ಅಸಮಾಧಾನ ಹೊರ ಹಾಕಿದರು.
ಹಾಗಿದ್ದರೇ ನಾನು ಕ್ಷೇತ್ರ ತ್ಯಾಗ ಮಾಡಿದ್ದು ತಪ್ಪಾ ಎಂದು ಸುಮಲತಾ ಆಂಬರೀಶ್ ಪ್ರಶ್ನೆ ಮಾಡಿದರು. ನನ್ನ ಅಭಿಮಾನಿಗಳು ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರು. ಸೋತ ಸೀಟನ್ನೇ ಬಿಡಲ್ಲ ಅಂತಹುದರಲ್ಲಿ ನಾನು ಗೆದ್ದ ಸೀಟು ಬಿಟ್ಟು ಕೊಟ್ಟಿದ್ದೀನಿ ಎಂದರು.