ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ರಾಜಸ್ಥಾನದಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ರಾಜಸ್ಥಾನವನ್ನು ಟಾರ್ಗೆಟ್ ಮಾಡಿ ಹಲವು ಸಭೆಗಳನ್ನು ನಡೆಸಿ ಆಗಿದೆ. ಹಿಂದೂ ಬಹುಸಂಖ್ಯಾತರ ಮತಗಳ ಕ್ರೋಡೀಕರಣಕ್ಕಾಗಿ ಅವರು ಯತ್ನ ಮಾಡುತ್ತಲೇ ಇದ್ದಾರೆ. ಆದರೆ ಈ ಬಾರಿ ಅವರಿಗೆ ಸುಲಭವಿಲ್ಲ. ಹಲವು ಜಾತಿ ಸಮುದಾಯಗಳು ಬಿಜೆಪಿಗೆ ತಿರುಗಿ ಬಿದ್ದಿವೆ.
ರಾಜಸ್ಥಾನದ ರಜಪೂತರ ಸಿಟ್ಟು ಕಡಿಮೆ ಆಗುತ್ತಿಲ್ಲ. ರಾಣಾ ಪ್ರತಾಪ ಸಿಂಹನ ಹೆಸರು ಹೇಳಿ ರಾಜಕಾರಣ ಮಾಡುತ್ತ ಬಂದ ಬಿಜೆಪಿ ಈ ಬಾರಿ ರಜಪೂತರಿಗೆ ಅನ್ಯಾಯ ಮಾಡಿದೆ ಎಂಬ ಮಾತು ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ.
ಈ ಸಂಬಂಧದಲ್ಲಿ ಹಲವಾರು ಸಭೆಗಳನ್ನು ಮಾಡಿರುವ ಈ ಸಮುದಾಯ ಯಾವ ಕಾರಣಕ್ಕೂ ಬಿಜೆಪಿಗೆ ಮತ ಹಾಕದಿರುವ ತೀರ್ಮಾನಕ್ಕೆ ಬಂದಿದೆ.
ಈ ಪರಿಸ್ಥಿತಿಯಲ್ಲಿ ರಾಜಸ್ಥಾನವನ್ನು ಮತ್ತೆ ವಶಪಡಿಸಿಕೊಳ್ಳುವುದಕ್ಕಾಗಿ ಎಲ್ಲ ತಂತ್ರಗಳನ್ನು ಅವರು ಬಳಸುತ್ತಿದ್ದಾರೆ. ಹಿಂದೂ ಮುಸ್ಲೀಂ ರ ನಡುವೆ ಬಿಕ್ಕಟ್ಟು ಸೃಷ್ಟಿಸಲು ಅವರು ಯತ್ನ ನಡೆಸಿದರು. ದೇಶದ ಸಂಪತ್ತು ಮುಸ್ಲೀಮರಿಗೆ ಹೋಗುತ್ತದೆ. ಕಾಂಗ್ರೆಸ್ ಗೆ ಮತ ಹಾಕಬೇಡಿ ಎಂದು ಹೇಳಿದರು. ಹೀಗೆ ಹೇಳುವಾಗ ಕಾಂಗ್ರೆಸ್ ಪಕ್ಷವನ್ನು ಜನರನ್ನು ಆಯ್ಕೆ ಮಾಡಬಹುದು ಎಂಬ ಭಯ ಪ್ರಧಾನಿ ಮತ್ತು ಬಿಜೆಪಿ ನಾಯಕರಲ್ಲಿ ಇತ್ತು.
ಆದರೆ ಜನ ಈ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಸಾಧಾರಣವಾಗಿ ಒಬ್ಬ ವ್ಯಕ್ತಿ ಸದಾ ಸುಳ್ಳು ಹೇಳುತ್ತಾನೆ ಎಂಬುದು ಅರ್ಥವಾದ ಮೇಲೆ ಆ ವ್ಯಕ್ತಿಯನ್ನು ಗಂಭೀರವಾಗಿ ಸ್ವೀಕರಿಸುವುದನ್ನು ಜನ ಬಿಟ್ಟು ಬಿಡುತ್ತಾರೆ.
ಇತ್ತೀಚೆಗೆ ಅವರು ಮಂಗಲ ಸೂತ್ರದ ಬಗ್ಗೆ ಮಾತನಾಡಿದ್ದು ನಿಮಗೆ ನೆನಪಿರಬಹುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಳಸೂತ್ರವನ್ನೇ ಕಸಿದುಕೊಳ್ಳಬಹುದು ಎಂದು ಹೆದರಿಸಲು ಬೆದರಿಸಲು ಮೋದಿ ಯತ್ನ ನಡೆಸಿದರು. ಕಾಂಗ್ರೆಸ್ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿತು. ಆದರೆ ಅಲ್ಲಿ ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳಲು ಟಿ.ಎನ್. ಶೇಷನ್ ಇಲ್ಲ.
ಇಂದು ರಾಜಸ್ಥಾನದಲ್ಲಿ ಮೋದಿ ಯಾವ ವಿಚಾರ ಮಾತನಾಡಬಹುದು ? ಮುಸ್ಲೀಂ ರಿಗೆ ಸಂಪತ್ತು ಹಂಚುವ ಬಗ್ಗೆ ಮಾತನಾಡಿಯಾಯಿತು. ಮಹಿಳೆಯ ಮಂಗಲಸೂತ್ರದ ವಿಚಾರ ಎತ್ತಿಯಾಯಿತು. ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಹೋಗಿದ್ದಕ್ಕೆ ಟೀಕಿಸಿಯಾಯಿತು. ಮಾಂಸಾಹಾರದ ಬಗ್ಗೆ ಟೀಕಿಸಿಯಾಯಿತು. ಇನ್ನು ಯಾವ ವಿಚಾರವಿದೆ ಅವರ ಬಳಿ ? ಮಹಿಳೆಯರ ಕಾಲುಂಗುರದ ಬಗ್ಗೆ ಮಾತನಾಡಬಹುದೆ ? ಚೂಡಿದಾರ್ ಬಗ್ಗೆ ಟೀಕಿಸಬಹುದೆ ?