ನವದೆಹಲಿ : ನಾನು ಅರವಿಂದ್ ಕೇಜ್ರೀವಾಲ್ ನಾನು ಭಯೋತ್ಪಾದಕನಲ್ಲ.. ಈಗ ತಿಹಾರ್ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಇಂದು ಕಳುಹಿಸಿರುವ ಸಂದೇಶ ಇದು. ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅರವಿಂದ್ ಕೇಜ್ರಿವಾಲ್ ಇವತ್ತು ಕಳೂಹಿಸಿರುವ ಸಂದೇಶದ ವಿವರಗಳನ್ನು ಮಾಧ್ಯಮಗಳಿಗೆ ನೀಡಿದರು.
ಕೇಜ್ರಿವಾಲ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭೇಟಿ ಮಾಡಿದ್ದರು. ಈ ಭೇಟಿ ಸಂದರ್ಭದಲ್ಲಿ ನೇರ ಭೇಟಿ ಇರಲಿಲ್ಲ.. ಗ್ಲಾಸಿನ ಮೂಲಕ ನೋಡಿ ಮಾತನಾಡಬಹುದಾಗಿತ್ತು. ಅರವಿಂದ್ ಕೇಜ್ರಿವಾಲ್ ಅವರನ್ನು ಮಾನಸಿಕವಾಗಿ ಕುಗ್ಗಿಸಲು ಯತ್ನ ನಡೆಯುತ್ತಿದೆ ಎಂದು ಸಂಜಯ್ ಸಿಂಗ್ ಆರೋಪಿಸಿದರು.
ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕರಂತೆ ಜೈಲಿನಲ್ಲಿ ನೋಡಿಕೊಳ್ಳಲಾಗುತ್ತಿದೆ. ಅವರ ಬಂಧು ಬಾಂಧವರನ್ನು ಭೇಟಿ ಮಾಡುವುದಕ್ಕೂ ಅವಕಾಶ ನೀಡಲಾಗುತ್ತಿಲ್ಲ ಎಂದು ಸಂಜಯ್ ಸಿಂಗ್ ಆರೋಪಿಸಿದರು.
ಮೂರು ಬಾರಿ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್ ದೇಶದ ಜನರಿಗೆ ಸಹೋದರರಾಗಿದ್ದರು, ದೆಹಲಿ ಜನರ ಕುಟುಂಬದ ಸದಸ್ಯರಾಗಿದ್ದರು ಎಂದು ಸಂಜಯ್ ಸಿಂಗ್ ಹೇಳಿದರು
ಇದೇ ಅಬ್ಕಾರಿ ಹಗರಣದ ಹೆಸರಿನಲ್ಲಿ ಬಂಧಿತರಾಗಿದ್ದ ಸಂಜಯ್ ಸಿಂಗ್ ಕೂಡ ೭ ತಿಂಗಳು ಜೈಲಿನಲ್ಲಿ ಇದ್ದರು, ಈಗ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇದು ನಮಗೆಲ್ಲ ಭಾವನಾತ್ಮಕ ವಿಚಾರ. ನೀವು ಅವರನ್ನು ಒಡೆಯಲು ಪ್ರಯತ್ನಿಸಿದರೆ ಅವರು ಇನ್ನು ಗಟ್ಟಿಯಾಗುತ್ತಾರೆ ಎಂದು ಹೇಳಿದ ಸಂಜಯ್ ಸಿಂಗ್ ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ನಾಚಿಕೆಯಾಗಬೇಕು ಎಂದರು.