ಸುದ್ದಿ ಟಿವಿ ಸ್ಪೆಷಲ್ ಡೆಸ್ಕ್ –

ಕುರ್ಚಿ ಪೈಪೋಟಿ

ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಒಳಗಿನ “ಮುಖ್ಯಮಂತ್ರಿ ಹಂಚಿಕೆ” ಕುರಿತ ಸುದ್ದಿ-ಗೊಂದಲಗಳು ಸಾಕಷ್ಟು ಜೋರಾಗಿ ಹರಿದಾಡುತ್ತಿವೆ. ಈ ನಡುವೆ, 2023 ರಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಲಾದ ಅಧಿಕಾರ ಹಂಚಿಕೆ ಎಂಬ ಒಪ್ಪಂದದ ಬಗ್ಗೆ ಭಿನ್ನಾಭಿಪ್ರಾಯ ಮತ್ತು ಅನೇಕ ಗೋಷ್ಠಿಗಳು ನಡೆಯುತ್ತಿವೆ. ಈ ಸಂಕೀರ್ಣ ಹಿನ್ನೆಲೆಯಲ್ಲಿ, 2025 ರ ನವೆಂಬರ್ 29 ರಂದು ಬೆಂಗಳೂರಿನಲ್ಲಿ ನಡೆದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವಿನ ಉಪಹಾರ ಸಭೆ ಈ ಗೊಂದಲಕ್ಕೆ ಒಂದು ತಾತ್ಕಾಲಿಕ ಮುಕ್ತಾಯ ಕೊಟ್ಟಿದೆ ಎಂದು ಹೇಳಬಹುದು.

ಸಭೆಯ ವಿವರ:

  • DK ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ “ಕಾವೇರಿ”ಗೆ ಆಗಮಿಸಿ, ಆತ್ಮೀಯ ಸ್ವಾಗತ ಪಡೆದರು.
  • ನಂತರ ಸ್ಪೆಷಲ್ ರೂಮ್‌ನಲ್ಲಿ ಪಕ್ಷದ ಉನ್ನತ ನಿರ್ದೇಶನದ ಸೂಚನೆ ಅನುಸಾರ ಉಪಹಾರ ಸಭೆ ನಡೆಯಿತು. ಈ ಭೇಟಿ ಅವಧಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವಿರಲಿಲ್ಲ.
  • ಉಪಹಾರದಲ್ಲಿ ಇಡ್ಲಿ, ಉಪ್ಪಿಟ್ಟು, ಕೇಸರಿಬಾತಿನಂತಹ ಸಾಮಾನ್ಯ ತಿಂಡಿಗಳು ಇದ್ದವು.

ಭೇಟಿಯ ನಂತರ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಏನು ಹೇಳಲಾಯಿತು?

  • ಸಿದ್ದರಾಮಯ್ಯ ಮತ್ತು ಡಿಕೆಶಿ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಈ ಗೊಂದಲ ಕೇವಲ ಮಾಧ್ಯಮ ಸೃಷ್ಟಿ ಎಂದು ಅವರು ಹೇಳಿದರು.
  • 2028ರ ಚುನಾವಣೆ ಮತ್ತು ಸ್ಥಳೀಯ ಚುನಾವಣೆಗಳಿಗೆ ಗಟ್ಟಿಯಾದ ತಯಾರಿ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು.
  • ಅಧಿಕಾರ ಹಂಚಿಕೆಗೆ ಹೈಕಮಾಂಡ್ ಏನು ಹೇಳುತ್ತದೋ ಅದನ್ನು ಪಾಲಿಸುವ ಕುರಿತು ಇಬ್ಬರೂ ಒಕ್ಕೊರಲಿನಲ್ಲಿ ಹೇಳಿಕೆ ನೀಡಿದರು.
  • ನೀವು ಏನೇ ಸೃಷ್ಟಿಸಿ, ನಾವು ಒಟ್ಟಿಗೆ ಇದ್ದೇವೆ, ಇರುತ್ತೇವೆ ಎಂದು ಮಾಧ್ಯಮಗಳೆದುರು ತೋರಿಸುವ ಯತ್ನ ಇದಾಗಿತ್ತು.

ಈ ಸಭೆಯಲ್ಲಿ ಕುರ್ಚಿ ಬದಲಾವಣೆ ಅಥವಾ ಅಧಿಕಾರ ಹಂಚಿಕೆಯ ಕುರಿತು ಸ್ಪಷ್ಟ ನಿರ್ಧಾರ ಹೊರಹೊಮ್ಮಿಲ್ಲ. ಡಿ.ಕೆ.ಶಿವಕುಮಾರ್ ಅವರು ೨೦೨೩ರ ಮೇನಲ್ಲಿ ನಡೆದ ಒಪ್ಪಂದವನ್ನು ಮತ್ತೊಮ್ಮೆ ನೆನಪಿಸಿ, ಅದನ್ನು ಸ್ಮರಿಸಬೇಕು ಎಂದು ಹೇಳಿದರು. ಆದರೆ ಸಿದ್ಧರಾಮಯ್ಯ ನಾನು ಇಂತಹ ಅಧಿಕಾರ ಹಂಚಿಕೆ ಒಪ್ಪಂದವನ್ನು ನೆನಸುವುದಿಲ್ಲ ಎಂದರು. ಒಟ್ಟಿನಲ್ಲಿ ಇಬ್ಬರೂ ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರು. ಆದ್ದರಿಂದ ಈ ಉಪಹಾರ ಸಭೆಯು ಒಂದು ತಾತ್ಕಾಲಿಕ ಶಾಂತಿ ಎಂದು ತೋರಲ್ಪಟ್ಟರೂ ಈ ಶಾಂತಿ ಎಷ್ಟು ದಿನ ಎಂದು ಹೇಳುವುದು ಕಷ್ಟ.

ರಾಜಕೀಯ ಪ್ರಾಮಾಣಿಕತೆ ಆಟ- ಯಾರು ಗೆದ್ದರು? ಯಾರು ಸೋತರು?

ಸಿದ್ದರಾಮಯ್ಯ

  • ಉಪಹಾರ ಸಭೆಯ ಮೂಲಕ ನಾಯಕತ್ವ ಬದಲಾವಣೆ ಕುರಿತು ಮಾಧ್ಯಮ ಮತ್ತು ಜನಸಾಮಾನ್ಯರ ಗಮನವನ್ನು ತಾತ್ಕಾಲಿಕವಾಗಿ ಮರೆಮಾಚಲು ಯಶಸ್ವಿಯಾದರು.
  • ಸಂಪೂರ್ಣ ೫ ವರ್ಷದ ಕೊನೆಯವರೆಗೂ ತಮ್ಮದೇ ನೇತೃತ್ವ ನಡೆಸುವುದು ತಮ್ಮ ಬದ್ಧತೆ ಎನ್ನುವ ನಿಲುವನ್ನು ಪುನಃ ಸ್ಪಷ್ಟಪಡಿಸಿದ್ದರು.

ಶಿವಕುಮಾರ್
* ಉಪಹಾರ ಸಭೆಯು ಒಮ್ಮತ ಮತ್ತು ಶಾಂತಿ ಸಂಭಾಷಣೆಗೆ ಒತ್ತು ನೀಡಿತು. ಮಾಧ್ಯಮಕ್ಕೆ ನಾವು ಒಟ್ಟಿಗಿದ್ದೇವೆ ಎಂಬ ಸಂದೇಶ ತಲುಪಿತು. ಇದು ಅವರಿಬ್ಬರ ಸಂಬಂಧವನ್ನು ತಕ್ಕ ಮಟ್ಟಿಗೆ ಸ್ಥಿರಗೊಳಿಸಿತು.

  • ೨೦೨೩ರ ಒಪ್ಪಂದವನ್ನು ಸ್ಮರಿಸಿ, ಸ್ವಲ್ಪ ಕಾಲ ಹೆಚ್ಚಾದರೂ ಪರವಾಗಿಲ್ಲ, ನಿಮ್ಮ ಮಾತನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿ ಮುಂದಿನ ರಾಜಕೀಯ ಚೌಕಾಸಿಯ ಭೀತಿಯನ್ನು ಉಳಿಸುವಲ್ಲಿ ಯಶಸ್ವಿಯಾದರು.

ಮುಂದಿನ ಅನಿಶ್ಚಿತತೆಗಳು

  • ಈ ಉಪಹಾರ ಸಭೆಯು ತಾತ್ಕಾಲಿಕ ಸಮಾಧಾನವಾದರೂ, ಒಂದು ಗಟ್ಟಿತನದ ನಿರ್ಣಾಯಕ ನಿರ್ಧಾರ ಹೊರಬಂದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಹೈಕಮಾಂಡ್ ನ ಬದ್ಧತೆ, ಶಾಸಕರ ಗುಂಪುಗಾರಿಕೆ, ಬೇಡಿಕೆ, ಲಾಬಿಗಳು ಮತ್ತಷ್ಟು ತೀವ್ರವಾಗಬಹುದು.
  • ೨೦೨೮ರ ಚುನಾವಣಾ ತಯಾರಿ, ಪಕ್ಷದ ಒಳಗುಂಪುಗಳ ಸ್ಥಿತಿಗತಿ, ರಾಜ್ಯದ ಸಾರ್ವಜನಿಕ ಅಭಿಪ್ರಾಯ ಎಲ್ಲವೂ ಉಪಹಾರ ಸಭೆಯಲ್ಲಿ ನಿರ್ಧಾರವಾಗಿಲ್ಲ. ಈ ಕಾರಣದಿಂದ ಮುಂದಿನ ದಿನಗಳಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಬಹುದು.
  • ಮೌನ ಒಪ್ಪಂದವು ಮಾಧ್ಯಮಗಳಿಗೆ ತೋರ್ಪಡಿಕೆಯಲ್ಲಿ ಯಶಸ್ವಿಯಾದರೂ, ಈ ಒಗ್ಗಟ್ಟು ಎಷ್ಟು ದಿನ ಎಂಬ ಬಗ್ಗೆ ಅನುಮಾನಗಳಿವೆ.

ಆದ್ದರಿಂದ ಇದು ನೇರವಾಗಿ ಸಿದ್ಧರಾಮಯ್ಯ ಮತ್ತು ಡಿಕೆಶಿವಕುಮಾರ್ ನಡುವಿನ ಅಧಿಕಾರ ಸಂಘರ್ಷ ಮಾತ್ರವಲ್ಲ, ಕಾಂಗ್ರೆಸ್ ಪಕ್ಷದ ಒಳಗಿನ ಸಿದ್ಧಾಂತಗಳು, ಅವಲಂಬನೆ ಮತ್ತು ಮೇಲ್ವಿಚಾರಣೆಯ ಮೌಲ್ಯಗಳ ಪರೀಕ್ಷೆಯೂ ಆಗಲಿದೆ. ಮಾಧ್ಯಮ ಮತ್ತು ಜನತೆಗೆ ಒಗ್ಗಟ್ಟು, ಶಾಂತಿ ಮತ್ತು ಗುರಿ ಸ್ಪಷ್ಟತೆಯ ಸಂದೇಶ ಕೊಟ್ಟರೂ, ಅಧಿಕಾರ ಹಂಚಿಕೆ, ಅದರ ಕುರಿತ ಒಪ್ಪಂದ ಮತ್ತು ಅನಿಶ್ಚಿತ ಭವಿಷ್ಯ ಇನ್ನೂ ಬಾಕಿಯಾಗಿದೆ. ತಾತ್ಕಾಲಿಕ ಶಾಂತಿ ಇದ್ದರೂ ಬೂದಿ ಮುಚ್ಚಿದ ಕೆಂಡ ಹಾಗೆಯೇ ಮುಂದುವರೆಯಲಿದೆ. – ಸುದ್ದಿ ಟಿವಿ ಸ್ಪೆಷಲ್ ಡೆಸ್ಕ್

Author

Leave a Reply

Your email address will not be published. Required fields are marked *