ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ
ಇದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿಕೆ.
ಮಾಧ್ಯಮಗಳ ಜೊತೆ ಮಾತನಾಡಿದ ಪಟೋಲೆ, ‘ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಅಯೋಧ್ಯೆಯ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ. ಶಂಕರಾಚಾರ್ಯರು ಇದರ ಪಾವಿತ್ರ್ಯವನ್ನು ವಿರೋಧಿಸಿದ್ದು ನಿಮಗೆ ಗೊತ್ತೇ ಇದೆ. ಆದ್ದರಿಂದ, ನಾಲ್ವರು ಶಂಕರಾಚಾರ್ಯರು ರಾಮಮಂದಿರವನ್ನು ಶುದ್ಧೀಕರಿಸುತ್ತಾರೆ. ರಾಮ ಮಂದಿರ ನಿರ್ಮಾಣದಲ್ಲಿ ನರೇಂದ್ರ ಮೋದಿ ಶಿಷ್ಟಾಚಾರಕ್ಕೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು
ಕೆಲ ದಿನಗಳ ಹಿಂದೆಯಷ್ಟೇ ನಾನಾ ಪಟೋಲೆ ಬಿಜೆಪಿಯನ್ನು ತೀವ್ರವಾಗಿ ಟಾರ್ಗೆಟ್ ಮಾಡಿದ್ದರು. ಕಳೆದ 10 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್ಟಿ ಮೂಲಕ ಜನರನ್ನು ಲೂಟಿ ಮಾಡಿದೆ. ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರಾಟ ಮಾಡುವ ಮೂಲಕ ದೇಶವನ್ನು ಹಾಳು ಮಾಡಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ವಿರುದ್ಧ ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶವಿದ್ದು, ಹೀಗಾಗಿ ಬಿಜೆಪಿ ಸೋಲು ಖಚಿತ ಎಂದು ಪಟೋಲೆ ಹೇಳಿದರು. ‘ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಟೀಕಿಸುವ ಬದಲು ಬಿಜೆಪಿ ಕಳೆದ 10 ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ಸುಧಾರಿಸಲು ಏನು ಕ್ರಮ ಕೈಗೊಂಡಿದೆ ಎಂಬುದನ್ನು ಹೇಳಬೇಕು’ ಎಂದರು.
