ಬೆಂಗಳೂರು : ಜನ ಸಾಮಾನ್ಯರ ಪರವಾಗಿ ಎಂದಿಗೂ ಕೆಲಸ ಮಾಡದೇ ಬರೀ ಕಾರ್ಪೊರೇಟ್ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಲೇ ಬಂದಿರುವ ಕೇಂದ್ರ ಸರ್ಕಾರವು ಶ್ರಮಿಕ ವರ್ಗವನ್ನು ವಂಚಿಸುವ ತನ್ನ ಹೀನ ಪ್ರವೃತ್ತಿಯನ್ನು ಮುಂದುವರೆಸಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ ಮಹಾದೇವಪ್ಪ ತಿಳಿಸಿದ್ದಾರೆ.
ಕೇಂದ್ರ ಬಜೆ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು , 50 ಲಕ್ಷದ 65 ಸಾವಿರ ಕೋಟಿ ಗಾತ್ರದ ಬಜೆಟ್ ನಲ್ಲಿ ಜನಪರವಾಗಿ ಹೇಳಿಕೊಳ್ಳಬಹುದಾದ ಒಂದೇ ಒಂದು ಯೋಜನೆಯೂ ಸಹ ಇಲ್ಲದ ಕೇಂದ್ರದ ಬಜೆಟ್ ಕರ್ನಾಟಕ ವಿರೋಧಿಯಾಗಿದ್ದು ರಾಜ್ಯ ನೀಡುವ ತೆರಿಗೆ ಹಣಕ್ಕೆ ಪ್ರತಿಯಾಗಿ ಅವಮಾನವನ್ನು ನಮಗೆ ಉಡುಗೊರೆಯಾಗಿ ನೀಡಿದೆ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಮಧ್ಯಮ ವರ್ಗಕ್ಕೆ 12 ಲಕ್ಷದ ವರೆಗೆ ಆದಾಯ ತೆರಿಗೆ ವಿನಾಯ್ತಿ ಎಂದು ಹೇಳಿ ಆ ಮೂಲಕ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರವು ನಿಗದಿ ಪಡಿಸಿರುವ ತೆರಿಗೆ ಮಿತಿಯ slab ನಲ್ಲಿ 8 ರಿಂದ 12 ಲಕ್ಷದವರೆಗಿನ ಆದಾಯ ತೆರಿಗೆಗೆ ಶೇ. 10 ರಷ್ಟು ತೆರಿಗೆ ಎಂದು ನಮೂದಿಸಿದ್ದು ಜನರನ್ನು ಅಸ್ಪಷ್ಟತೆಗೆ ನೂಕುವ ಕೆಲಸ ಮಾಡಿದೆ. ಈಗಾಗಲೇ ಇವರ ಹಿಂದಿನ ಘೋಷಣೆಗಳು ಬಹುತೇಕ ಸುಳ್ಳೆಂದು ಸಾಬೀತಾಗಿದ್ದು ಈ ಗೊಂದಲಗಳೂ ಕೂಡಾ ಕೇಂದ್ರ ಸರ್ಕಾರದ ವಂಚನೆಯ ತಂತ್ರವಾಗಿದೆ ಎಂದು ನಾವು ಊಹಿಸಬಹುದಾಗಿದೆ ಎಂದು ಹೇಳಿದ್ದಾರೆ.
ಹಿಂಬಾಲಕರ ಮೂಲಕ ತನ್ನನ್ನು ವಿಶ್ವಗುರು ಎಂದು ಹೇಳಿಕೊಳ್ಳುವ ಪ್ರಧಾನಿಗಳ ಆಡಳಿತದಲ್ಲಿ ದೇಶದ ಸಾಲವು ಮತ್ತೆ 15.86 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದ್ದು ಯಾವುದೇ ಯೋಜನೆಗಳಿಲ್ಲದೇ ಯಾರ ಜೇಬು ತುಂಬಿಸಲು ಇವರು ಇಷ್ಟೊಂದು ಸಾಲ ಮಾಡುತ್ತಿದ್ದಾರೆ ಎಂಬುದು ಸದ್ಯದ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಕಾರ್ಪೊರೇಟ್ ತೆರಿಗೆಯ ಪ್ರಮಾಣವು ಯಥಾಸ್ಥಿತಿಯಲ್ಲಿ ಮುಂದುವರೆದಿದ್ದು, ಸರ್ಕಾರದಿಂದ ಕಾರ್ಪೊರೇಟ್ ಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಹೊರತಾಗಿಯೂ ಕಂಪನಿಗಳು ಏಳಿಗೆ ಆಗದೇ ಹಾಗೇ ಉಳಿದಿದ್ದು ಸರ್ಕಾರವು ಖಾಸಗಿಯವರ ಸಾಲವನ್ನು ಜನರ ಮೇಲೆ ಹೊರಿಸುವ ಕೆಲಸ ಮಾಡುತ್ತಿವೆ. ಮುಖ್ಯವಾಗಿ ಬಜೆಟ್ ನಲ್ಲಿ ಎಲ್ಲಿಯೂ ಕೂಡಾ ಉದ್ಯೋಗ ಸೃಷ್ಟಿಯ ಕುರಿತು ಮಾತನಾಡದ ಕೇಂದ್ರ ಸರ್ಕಾರವು ಯುವಕರ ಮೇಲಿನ ತನ್ನ ತಿರಸ್ಕಾರದ ಧೋರಣೆಯನ್ನು ಮುಂದುವರೆಸಿದೆ ಎಂದು ಹೇಳಿದ್ದಾರೆ.
ಅತಿ ಮುಖ್ಯವಾಗಿ ದೇಶದ ಬೆನ್ನೆಲುಬು ಆಗಿರುವ ರೈತರಿಗೆ ಯಾವುದೇ ರೀತಿಯ ಉಪಯುಕ್ತ ಯೋಜನೆಗಳನ್ನು ನೀಡದ ಕೇಂದ್ರ ಸರ್ಕಾರವು ತಾನು ಸದಾ ರೈತ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದಿದ್ದಾರೆ.
ಅತಿ ಮುಖ್ಯವಾಗಿ ಕರ್ನಾಟಕದಿಂದ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿ, ಕೇಂದ್ರದಲ್ಲಿ ಹಣಕಾಸು ಸಚಿವೆಯೂ ಆಗಿರುವ ನಿರ್ಮಲಾ ಸೀತಾರಾಮನ್ ಅವರು, ಮೇಕೆದಾಟು, ಕಳಸಾ ಬಂಡೂರಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಯಾವುದೇ ಅನುದಾನ ನೀಡದೇ ಹೆಚ್ಚು ತೆರಿಗೆ ಪಾವತಿಸುವ ನಮ್ಮ ರಾಜ್ಯಕ್ಕೆ ವಂಚನೆ ಮಾಡಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಕೊನೆಯದಾಗಿ ನಮ್ಮ ಸಮಾಜ ಕಲ್ಯಾಣ ಇಲಾಖೆಗೆ ಕೇಂದ್ರದಿಂದ ಬರಬೇಕಿದ್ದ 245 ಕೋಟಿ ರೂಪಾಯಿಗಳ ಪೈಕಿ ಕೇವಲ 58.08 ಕೋಟಿ ರೂಪಾಯಿಗಳಷ್ಟು ಅನುದಾನವು ಬಿಡುಗಡೆ ಆಗಿದ್ದು ಉಳಿಕೆ ಹಣವನ್ನು ಬಿಡುಗಡೆ ಮಾಡುವಲ್ಲಿ ಕೇಂದ್ರ ಸರ್ಕಾರವು ವಿಳಂಬ ಮಾಡುತ್ತಿದ್ದು ಇದು ಪರಿಶಿಷ್ಟ ಸಮುದಾಯಗಳ ವಿರೋಧಿ ಧೋರಣೆಗೆ ಹಿಡಿದ ಕನ್ನಡಿ ಆಗಿದ್ದು ಈ ನಿರ್ಲಕ್ಷ್ಯವನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.
