ಮುಂಬೈ: ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಜ್ಞೆ ತಪ್ಪಿ ಕುಸಿದ ಬಿದ್ದ ಘಟನೆ ಇಂದು ನಡೆದಿದೆ. ನಂತರ ಆಸ್ಪತ್ರೆಗೆ ಸೇರಿದ ಅವರು ಈಗ ಸುಧಾರಿಸಿಕೊಳ್ಳುತ್ತಿದ್ದಾರೆ. ತಮಗೆ ಪ್ರಜ್ಞೆ ತಪ್ಪಿದ್ದ ಬಗ್ಗೆ ವಿವರ ನೀಡಿರುವ ಅವರು ಬಿಸಿಲಿನಿಂದಾಗಿ ನನಗೆ ಪ್ರಜ್ಞೆತಪ್ಪಿತ್ತು. ಈಗ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಪೂರ್ವ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಘಟನೆ ನಡೆಯಿತು.
ಯವತ್ಮಾಲ್-ವಾಶಿಮ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪುಸಾದ್ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಗಡ್ಕರಿ ಅವರು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಬಿಟ್ಟರು. ತಕ್ಷಣ ಅವರ ಅಂಗರಕ್ಷಕರು ಹಾಗೂ ಪಕ್ಷದ ನಾಯಕರು ಧಾವಿಸಿ ಅವರನ್ನು ಆಸ್ಪತ್ರೆ ಸಾಗಿಸಿದರು.
ಈ ಕಾರ್ಯಕ್ರಮದಲ್ಲಿ ವೈದ್ಯರು ಇದ್ದ ಕಾರಣ ಅವರನ್ನು ಪರೀಕ್ಷೆ ಮಾಡಿ ಆಸ್ಪತ್ರೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.
“ಮಹಾರಾಷ್ಟ್ರದ ಪುಸಾದ್ನಲ್ಲಿ ನಡೆದ ರ್ಯಾಲಿಯಲ್ಲಿ ಬಿಸಿಲಿನ ಕಾರಣದಿಂದ ನಾನು ಅಸ್ವಸ್ಥನಾಗಿದ್ದೆ. ಆದರೆ ಈಗ ನಾನು ಸಂಪೂರ್ಣವಾಗಿ ಸರಿಯಾಗಿದ್ದೇನೆ ಮತ್ತು ಮುಂದಿನ ರ್ಯಾಲಿಯಲ್ಲಿ ಭಾಗವಹಿಸಲು ವರುದ್ಗೆ ಹೋಗುತ್ತಿದ್ದೇನೆ” ಎಂದು 66 ವರ್ಷದ ನಿತಿನ್ ಗಡ್ಕರಿ ಅವರು ಎಕ್ಸ್ (ಟ್ವೀಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.