ನವದೆಹಲಿ : ಭಾರತದ ಅರ್ಥಿಕತೆಯ ಕುರಿತು ಅನಗತ್ಯ ಹೈಪ್ ಸೃಷ್ಟಿಮಾಡಲಾಗುತ್ತಿದೆ. ಇದು ಕೆಲವು ರಾಜಕಾರಣಿಗಳಿಗೆ ಬೇಕಾಗಿದೆ. ಆದರೆ ಇದು ಸರಿಯಾದುದಲ್ಲ ಎಂದು ಆರ್ ಬಿ ಐ ಮಾಜಿ ಗವರ್ನರ್ ರಘುರಾಮ್ ರಾಜನ್ ಎಚ್ಚರಿಕೆ ನೀಡಿದ್ದಾರೆ.
ದೇಶದ ಆರ್ಥಿಕತೆಯ ಬಗ್ಗೆ ಈಗ ಸೃಷ್ಟಿಸಲಾಗಿರುವ ಮಿಥ್ಯೆ ಸತ್ಯವಾಗಲು ಇನ್ನೂ ಕೆಲವು ವರ್ಷಗಳ ಕಠಿಣ ಪರಿಶ್ರಮ ಬೇಕು. ಆದರೆ ಈಗಲೇ ಭಾರತ ಪ್ರಬಲ ಆರ್ಥಿಕತೆಯಾಗಿದೆ ಎಂಭ ನಂಬಿಕೆಗೆ ಬಲಿಯಾಗುವುದು ಅಪಾಯಕಾರಿ ಎಂದೂ ಅವರು ಹೇಳಿದ್ದಾರೆ.
ಮುಂಬರುವ ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲು ಎಂದರೆ ಅದು ಶೈಕ್ಷಣಿಕ ಮಟ್ಟದ ಅಭಿವೃದ್ಧಿ ಮತ್ತು ಕುಶಲಕರ್ಮಿಗಳನ್ನು ಸಿದ್ಧಪಡಿಸುವುದೇ ಆಗಿದೆ. ನಾವು ಇಂತಹ ಭ್ರಮೆಯನ್ನು ನಂಬಿಕೊಂಡಿದ್ದರೆ ಭಾರತದ ಯುವ ಜನಾಂಗಕ್ಕೆ ತಲುಪಿಸುವಲ್ಲಿ ನಾವು ವಿಫಲರಾಗುತ್ತೇವೆ. ಭಾರತದ ಬಹಳಷ್ಟು ಮಕ್ಕಳು ಎಸ್ ಎಸ್ ಎಲ್ ಸಿ ನಂತರದ ಶಿಕ್ಷಣವನ್ನು ಮುಂದುವರಿಸದೆ ಹೊರ ಹೋಗುವ ಸ್ಥಿತಿ ಇದೆ. ಹೀಗಿರುವಾಗ ಬಲಿಷ್ಟ ಆರ್ಥಿಕತೆ ಎನ್ನುವುದು ನಾನ್ ಸೆನ್ಸ್ ಎಂದು ಅವರು ಹೇಳಿದ್ದಾರೆ.
ನಮ್ಮ ವರ್ಕ್ ಫೋರ್ಸ್ ಬೆಳೆಯುತ್ತಿದೆ. ಆದರೆ ಇದು ಉತ್ತಮ ಕೆಲಸ ಪಡೆಯುವವರಿಗೆ ಸೀಮಿತವಾಗಿದೆ. ನಾವು ಹೆಚ್ಚಿನ ಕೆಲಸ ಮತ್ತು ಉತ್ತಮ ಕೆಲಸವನ್ನು ಸೃಷ್ಟಿಸದಿದ್ದರೆ. ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಅಚ್ಚರಿಕೆಯನ್ನು ಅವರು ನೀಡಿದ್ದಾರೆ.
ವಿದೇಶಿ ಬಂಡವಾಳ ದೇಶದಲ್ಲಿ ಹರಿದು ಬರಲು ಆಸಕ್ತಿ ಹೆಚ್ಚುತ್ತಿರುವುದು ನಿಜ. ಇದಕ್ಕೆ ಬಹುದೊಡ್ಡ ಕಾರಣ ನಮ್ಮ ವಿಶಾಲ ಮಾರುಕಟ್ಟೆ. ಇದಕ್ಕೆ ಪೂರಕವಾದ ಮಾನವ ಸಂಪನ್ಮೂಲವನ್ನು ನಾವು ಸೃಷ್ಟಿಸದಿದ್ದರೆ ನಾವು ಗುರಿಯನ್ನು ತಲುಪಲಾರೆವು ಎಂಬ ಎಚ್ಚರಿಕೆಯ ಮಾತನ್ನು ಅವರು ಆಡಿದ್ದಾರೆ. ಆಧುನಿಕ ಆರ್ಥಿಕತೆಯನ್ನು ರೂಪಿಸುವುದಕ್ಕೆ ಬೇಕಾದ ಅಂಶಗಳನ್ನು ವಿವರಿಸಿರುವ ಅವರು ಯಾವ ಯಾವ ಕ್ಷೇತ್ರಗಳಿಗೆ ಆಧ್ಯತೆ ನೀಡಬೇಕು ಎಂಬ ಸಲಹೆಯನ್ನು ನೀಡಿದ್ದಾರೆ,
