ಬಳ್ಳಾರಿ : ಗಂಗಾವತಿ ಶಾಸಕ ಜಿ.ಜನಾರ್ಧನರೆಡ್ಡಿ ಅವರು ಕರ್ನಾಟಕ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪಕ್ಷ ಸೇರಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಲಿದ್ದಾರೆ. ಈ ಕುರಿತು ಎಲ್ಲಾ ಚರ್ಚೆಗಳಿಗೆ ಸೋಮವಾರ (ಮಾರ್ಚ್ ೨೫) ರಂದು ಅಂತಿಮ ತೆರೆ ಬೀಳಲಿದೆ.
ಕಲ್ಯಾಣ ಪ್ರಗತಿ ಪಕ್ಷದ ಪದಾಧಿಕಾರಿಗಳು ಮತ್ತು ಮುಖಂಡರ ಸಭೆಯನ್ನು ಬೆಂಗಳೂರಿನ ಮನೆಯಲ್ಲಿ ಭಾನುವಾರ ನಡೆಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಬಿಜೆಪಿ ಸೇರುವ ವಿಚಾರವನ್ನು ನಮಗೆಲ್ಲರಿಗೂ ಹೇಳಿದ್ದಾರೆ. ಜಿ. ಜನಾರ್ಧನರೆಡ್ಡಿ ಅವರ ನಿರ್ಧಾರವನ್ನು ನಾವೆಲ್ಲರೂ ಸ್ವಾಗತಿಸಿದ್ದೇವೆ ಎಂದು ಮುಖಂಡ ಗೋನಾಳ್ ರಾಜಶೇಖರ ಗೌಡ ಅವರು ತಿಳಿಸಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ, ಸೋಮವಾರ ಹೋಳಿ ಹುಣ್ಣಿಮೆ ಇರುವ ಕಾರಣ, ಜಿ. ಜನಾರ್ಧನರೆಡ್ಡಿ ಅವರು ತಮ್ಮ ಅಪಾರ ಬೆಂಬಲಿಗರ ಜೊತೆಯಲ್ಲಿ ಬಿ.ವೈ. ವಿಜಯೇಂದ್ರ ಅವರ ಸಮ್ಮುಖದಲ್ಲಿ ನಾಳೆಯೇ ಬಿಜೆಪಿ ಸೇರಲಿದ್ದಾರೆ .
ಆ ನಂತರ, ಬಿಜೆಪಿ ರಾಷ್ಟ್ರೀಯ ನಾಯಕರುಗಳು ಮತ್ತು ಮುಖಂಡರನ್ನು ಭೇಟಿ ಮಾಡಿ, ಪಕ್ಷದ ಸಂಘಟನೆ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಂತರ ಬಿಜೆಪಿಯಲ್ಲಿ ನಿರ್ಲಕ್ಷ್ಯ ಕ್ಕೆ ಒಳಗಾಗಿದ್ದ ಜಿ. ಜನಾರ್ಧನರೆಡ್ಡಿ ಮತ್ತು ಸಹೋದರರು ಈ ಮೂಲಕ ಪಕ್ಷದಲ್ಲಿ ಪುನಃ ಹಿಡಿತ ಸಾಧಿಸಿ ತಮ್ಮ ಪ್ರಭಾವ ತೋರಿಸಲಿದ್ಧಾರೆ ಎಂದು ಹೇಳಲಾಗಿದೆ.
ಜಿ. ಜನಾರ್ಧನ ರೆಡ್ಡಿ ಬಿಜೆಪಿ ಸೇರ್ಪಡೆ ಆಗುವ ಮೂಲಕ ಬಳ್ಳಾರಿ, ಕೊಪ್ಪಳ, ರಾಯಚೂರು, ಗದಗ, ಹಾವೇರಿ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಬಿಜೆಪಿಗೆ ಆನೆ ಬಲ ಬರಲಿದೆ. ಯಾವುದೇ ಷರತ್ತುಗಳು ಇಲ್ಲದೇ ರೆಡ್ಡಿ ಬಿಜೆಪಿ ಸೇರಿದ್ದೂ, ತಮ್ಮದೇ ಆದ ಬೇಡಿಕೆಗಳನ್ನು ಕಾಲಕಾಲಕ್ಕೆ ಈಡೇರಿಸಿಕೊಳ್ಳುವ ಜಾಣತನ ರೆಡ್ಡಿಗಿದೆ.
ಈ ಹಿನ್ನಲೆಯಲ್ಲಿ ಬಳ್ಳಾರಿ, ಗಂಗಾವತಿ, ಹುನುಗುಂದ ಸೇರಿ ೧೦ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮವರನ್ನು ಕಣಕ್ಕಿಳಿಸಲಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜಿ. ಜನಾರ್ಧನ ರೆಡ್ಡಿ ಅವರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿ, ಬಿಜೆಪಿ ಸೇರ್ಪಡೆ ವಿಚಾರಕ್ಕೆ ದಿಕ್ಕು ತಪ್ಪಿಸಿದ್ದರು.
ಪ್ರತಿದಾಳಿ
ಜಿ. ಜನಾರ್ಧನರೆಡ್ಡಿ ಅವರು ಬಿಜೆಪಿ ಸೇರುವುದರನ್ನು ಕಾಂಗ್ರೆಸ್ ಟೀಕಿಸಿದಲ್ಲಿ, ರೆಡ್ಡಿ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರುವುದನ್ನು ಪ್ರಸ್ತಾಪಿಸಲಿದೆ.
ಜಿ. ಜನಾರ್ಧನ ರೆಡ್ಡಿ ಅವರನ್ನು ಸಿಬಿಐ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2011ರ ಸೆಪ್ಟೆಂಬರ್ 5ರಂದು ಬಂಧಿಸಿದ್ದನ್ನು ಸ್ಮರಿಸಬಹುದು.
