ಬೆಂಗಳೂರು : ಕೆಲವೇ ವರ್ಷಗಳಲ್ಲಿ ಭಾರತೀಯ ಆಯುರ್ವೇದ ಮಾರುಕಟ್ಟೆಯನ್ನು ತನ್ನ ಹಿಡಿತಕ್ಕೆ ತೆಗದುಕೊಂಡ ಪತಂಜಲಿಗೆ ಈಗ ಕಂಟಕ. ದೇಶ ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ರಾಮದೇವ್ ಈಗ ರಾಮ ಜಪ ಮಾಡುವ ಸ್ಥಿತಿ ಬಂದಿದೆ.
ರಾಮದೇವ್ ಅವರ ಪತಂಜಲಿ ನೀಡುತ್ತಿದ್ದ ಜಾಹೀರಾತುಗಳು ವಿವಾದವನ್ನು ಸೃಷ್ಟಿಸಿದ್ದವು, ಈ ಕುರಿತು ಭಾರತೀಯ ವೈದ್ಯಕೀಯ ಸಂಸ್ಥೆ ಸುಪ್ರೀಂ ಕೋರ್ಟ್ ಏರಿತ್ತು. ನ್ಯಾಯಾಲಯ ಈ ಬಗ್ಗೆ ವಿಚಾರಣೆ ನಡೆಸಿ ಪತಂಜಲಿ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಸ್ವಾಮಿ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಸಲ್ಲಿಸಿದ್ದ ಆಫಿಡೆವಿಟ್ ಕುರಿತು ನ್ಯಾಯಾಲಯ ಅವರಿಬ್ಬರನ್ನೂ ಜಾಡಿಸಿತ್ತು. ಇದಾದ ಮೇಲೆ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಬೇಷರತ್ ಕ್ಷಮಾಯಾಚನೆ ಮಾಡಿದ್ದರು. ಅದರಂತೆ ಇನ್ನು ಮುಂದು ಸುಳ್ಳು ಜಾಹೀರಾತು ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಬರೆದು ಕೊಟ್ಟಿದ್ದರು.
ತನ್ನ ತೀರ್ಪಿನಲ್ಲಿ ಉತ್ತರಾಖಂಡದ ಔಷಧ ಪರವಾನಿಗಿ ಮತ್ತು ನಿಯಂತ್ರಣ ಪ್ರಾಧಿಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದಲ್ಲಿ ಮಾರಾಟವಾಗುವ ಪತಂಜಲಿ ಉತ್ಪನ್ನಗಳ ಗುಣಮಟ್ಟದ ಪರಿಶೀಲನೆ ನಡೆಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಪತಂಜಲಿ ಆಯುರ್ವೇದ ಲಿಮಿಟೆಡ್ನಿಂದ ಬರುವ ಎಲ್ಲ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಎಲ್ಲ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ಔಷದ ನಿಯಂತ್ರಣ ಇಲಾಖೆ ಮತ್ತು ಆಯುಷ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಬಾಬಾ ರಾಮದೇವ್ ಅವರು ಆಯುರ್ವೇದ ಮತ್ತು ಭಾರತೀಯ ವೈದ್ಯ ಪದ್ಧತಿಗೆ ಅಪಖ್ಯಾತಿ ತಂದಿದ್ದಾರೆ. ಆರೋಗ್ಯ, ವ್ಯಾಪಾರ ಅಥವಾ ರಾಜಕೀಯದಲ್ಲಿ ನಿಮಗೆ ಕುರುಡು ನಂಬಿಕೆ ಇದ್ದಾಗ ಹೀಗಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
