ಶಿವಮೊಗ್ಗ: ಹಾವೇರಿ ಜಿಲ್ಲೆ ಬ್ಯಾಡಗಿ ಬಳಿ ಇತ್ತೀಚೆಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬವನ್ನ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ಭೇಟಿ ಮಾಡಿ ಸಾಂತ್ವನ ಹೇಳಿ ತಲಾ 1ಲಕ್ಷ ರೂ. ಪರಿಹಾರ ನೀಡಿದರು.
ಇಂದು ನಟ ಶಿವಣ್ಣ ದಂಪತಿ ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಹಣ ನೀಡಿದರು. ಶಿವಣ್ಣ ದಂಪತಿಗೆ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ಸಾಥ್ ನೀಡಿದರು.

ಕೆಲ ದಿನಗಳ ಹಿಂದೆ ಎಮ್ಮೆಹಟ್ಟಿಗೆ ಭೇಟಿ ನೀಡಿ ಕುಟುಂಬಗಳಿಗೆ ನಟ ಶಿವರಾಜ್ಕುಮಾರ್ ಹಾಗೂ ಗೀತಾ ಸಾಂತ್ವನ ಹೇಳಿದ್ದರು. ಇದೀಗ ಮೃತರ ಕುಟುಂಬಗಳಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದಾರೆ.
ಏನಿದು ಘಟನೆ ?
ಕಳೆದ 15 ದಿನದ ಹಿಂದಷ್ಟೇ ಹೊಸ ಸೆಕೆಂಡ್ ಹ್ಯಾಂಡ್ ಟೆಂಪೊ ಟ್ರಾಕ್ಸ್ ವಾಹನ ಖರೀದಿ ಮಾಡಿದ್ದ ಕುಟುಂಬ, ವಾಹನಕ್ಕೆ ಪೂಜೆ ಮಾಡಿಸಲು ಮನೆ ದೇವರು ಯಲ್ಲಮ್ಮ ದೇವಾಲಯಕ್ಕೆ ತೆರಳಿದ್ದರು. ನಾಗೇಶ್ ಕುಟುಂಬಸ್ಥರು ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಮ್ಮ ದೇವಾಲಯಕ್ಕೆ ಸೋಮವಾರ ರಾತ್ರಿ ತೆರಳಿದ್ದರು. ವಾಹನಕ್ಕೆ ಪೂಜೆ ಮಾಡಿಸಿಕೊಂಡು ಮರಳುತ್ತಿದ್ದಾಗ ಈ ಘೋರ ದುರಂತ ಸಂಭವಿಸಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು.

ಟಿಟಿ ವಾಹನ ಖರೀದಿಸಿ ದೇವರ ದರ್ಶನಕ್ಕೆ ಕುಟುಂಬ ಸಮೇತ ತೆರಳಿದ್ದ ಚಾಲಕ ಆದರ್ಶ, ಪೂಜೆಯ ಬಳಿಕ ಅದರ ಫೋಟೋಗಳನ್ನು ತಮ್ಮ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದರು. ಸೋಮವಾರದಿಂದ ದೇವರ ದರ್ಶನಕ್ಕೆ ಹೊರಟಿದ್ದ ಆದರ್ಶ, ನಿನ್ನೆ ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ಟೆಂಪಲ್ನಲ್ಲಿ ವಾಹನ ಪೂಜೆ ಮಾಡಿಸಿ ಪೂಜೆ ಪೋಟೋಗಳನ್ನ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದರು. ಇಂದು ವಾಹನ ಛಿದ್ರಛಿದ್ರವಾಗಿದೆಯಲ್ಲದೆ ಇಡೀ ಕುಟುಂಬವನ್ನು ಬಲಿ ತೆಗೆದುಕೊಂಡಿತ್ತು.
