ಬೆಳಗಾವಿ: ವಾಲ್ಮೀಕಿ ನಿಗಮ ಮತ್ತು ಮೂಡಾ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ಸಿಬಿಐ ತನಿಖೆ ಎದುರಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ವಾಲ್ಮೀಕಿ ಮತ್ತು ಮೂಡಾ ಹಗರಣದಲ್ಲಿ ಸಿಎಂ ನೇರ ಹಸ್ತಕ್ಷೇಪವಿದ್ದು, ಮೊದಲು ರಾಜೀನಾಮೆ ನೀಡಲಿ ಎಂದು ಹೇಳಿದರು.
ಸಿಬಿಐಗೆ ಕೊಟ್ಟರೆ ಸಿಎಂಗೆ ಬಂಧನ ಭಯವೇ? :
ವಾಲ್ಮೀಕಿ ನಿಗಮದಲ್ಲಾದ 187 ಕೋಟಿ ರೂಪಾಯಿ ಹಗರಣವನ್ನು ಸಿಬಿಐಗೆ ವಹಿಸಿದರೆ ಸಿಎಂ ಸಿದ್ದರಾಮಯ್ಯ ಅವರಿಗೆ ಬಂಧನವಾಗಬೇಕಾಗುತ್ತದೆ ಎಂಬ ಭಯವೇ? ಎಂದು ಪ್ರಶ್ನಿಸಿದರು.
ಈ ಭ್ರಷ್ಟಾಚಾರದ ಹಗರಣದಲ್ಲಿ ತಮ್ಮದೇನೂ ಪಾತ್ರವಿಲ್ಲ ಎಂದಾದರೆ ಸಿಬಿಐಗೆ ವಹಿಸಲು ಭಯವೇಕೆ? ಸಿಬಿಐ ತನಿಖೆ ಎದುರಿಸಿ. ಕಾನೂನಿದೆ, ಕೋರ್ಟ್ ಇದೆ ಎಂದು ಸಿಎಂಗೆ ತಿವಿದರು.
ಸಿಬಿಐ ತನಿಖೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುದ್ಧಹಸ್ತರು ಎಂದಾದರೆ ಕಾಂಗ್ರೆಸ್ ಪಕ್ಷ ಮರಳಿ ಸಿಎಂ ಸ್ಥಾನ ನೀಡಲಿ ಎಂದು ಹೇಳಿದರು.
ಸಿಎಂ ವಿತಂಡವಾದ ಸರಿಯಲ್ಲ:
ವಾಲ್ಮೀಕಿ ಮತ್ತು ಮೂಡಾ ಹಗರಣದಲ್ಲಿ ಸಿಎಂ ವಿತಂಡವಾದ ಮಂಡಿಸುತ್ತಿದ್ದಾರೆ. ಇದು ಸರಿಯಲ್ಲ. ಸಮಗ್ರ ಮತ್ತು ಪಾರದರ್ಶಕತೆಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಲೇಬೇಕು ಎಂದು ಪ್ರಲ್ಹಾದ ಜೋಶಿ ಅಭಿಪ್ರಾಯಿಸಿದರು.
SIT ಯಿಂದ ಸಮಗ್ರ ತನಿಖೆ ಅಸಾಧ್ಯ:
ವಾಲ್ಮೀಕಿ ನಿಗಮದ ಹಗರಣದಲ್ಲಿ SIT ಸಮಗ್ರ ತನಿಖೆ ನಡೆಸುವುದು ಅಸಾಧ್ಯ. ಈ ತಖಾಧಿಕಾರಿಗಳನ್ನು ಬದಲಾಯಿಸುವ, ವರ್ಗಾವಣೆ ಮಾಡುವ ಅಧಿಕಾರ ಸಿಎಂಗೆ ಇರುತ್ತದೆ. ಹಾಗಾಗಿ SIT ಗಿಂತ ಸಿಬಿಐ ತನಿಖೆಯೇ ಸೂಕ್ತ ಎಂದರು ಜೋಶಿ.
ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ, ಶಾಸಕರ ಕೈವಾಡವಿಲ್ಲ ಎನ್ನುವುದಾಗಿದ್ದರೆ SIT ಗೇಕೆ ವಹಿಸಿದಿರಿ? SIT, ಸಚಿವ ನಾಗೇಂದ್ರ ಅವರನ್ನೇಕೆ ವಿಚಾರಣೆ ನಡೆಸಿತು? ಎಂದು ಪ್ರಶ್ನಿಸಿದ ಜೋಶಿ, ವಾಲ್ಮೀಕಿ ನಿಗಮ ಮತ್ತು ಮೂಡಾ ಹಗರಣ ಎರಡರಲ್ಲೂ ಸಿಎಂ ಸಿದ್ದರಾಮ್ಮಯ್ಯ ಅವರ ನೇರ ಪಾತ್ರವಿದೆ ಎಂದು ಆರೋಪಿಸಿದರು.
ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಸಂಬಂಧ ಅಧಿಕಾರಿಯ ಡೆತ್ ನೋಟ್ ಇದೆ. ಬ್ಯಾಂಕ್ ಅಧಿಕಾರಿಗಳ ಸಂಭಾಷಣೆ ಇದೆ. ಹಾಗಿದ್ದರೂ ಸಿಎಂ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಅತ್ಯಂತ ಬಾಲಿಶತನದಿಂದ ಕೂಡಿದೆ ಎಂದು ಹೇಳಿದರು.
ಇನ್ನು, ಮೂಡಾ ಹಗರಣದಲ್ಲಿ ಸಿಎಂ ಪ್ರತಿಷ್ಠಿತ ಬಡಾವಣೆಯಲ್ಲೇಕೆ ನಿವೇಶನ ಕೇಳಬೇಕು? ಮೂಡಾ ಸ್ವಾಧೀನಪಡಿಸಿಕೊಂಡ ಅವರ ಜಮೀನಿನಲ್ಲೇ ನಿವೇಶನ ಕೇಳಬೇಕಲ್ಲ ಎಂದ ಸಚಿವ ಜೋಶಿ, 2008 ರಲ್ಲಿ ಈ ಆಸ್ತಿ ಮೌಲ್ಯ 8 ಲಕ್ಷ, 2013 ರಲ್ಲಿ 25 ಲಕ್ಷ ಎಂದು ತೋರಿಸಿದ್ದಾರೆ. 2023ಕ್ಕಾಗಲೇ 65 ಕೋಟಿಯೇ? ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ಕಾಂಗ್ರೆನ್ನ DNA:
ಭ್ರಷ್ಟಾಚಾರ ಕಾಂಗ್ರೆಸ್ ನ DNA ಆಗಿದೆ. ಕಾಂಗ್ರೆಸ್ನಲ್ಲಿ ಭ್ರಷ್ಟಾಚಾರ ರಕ್ತಬಿಜಾಸುರನಂತೆ ವ್ಯಾಪಿಸಿದೆ. ನೆಹರು ಕಾಲದಿಂದಲೂ ಎಲ್ಲಾ ಪ್ರಧಾನಿಗಳು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಭ್ರಷ್ಟಾಚಾರದ ಲಕ್ಷಾಂತರ ಮೊಟ್ಟೆಗಳಿಗೆ ಕಾಂಗ್ರೆಸ್ ಕವು ಕೊಟ್ಟು ಮರಿಗಳನ್ನಾಗಿ ಮಾಡಿದೆ ಎಂದು ಜೋಶಿ ಮಾರ್ಮಿಕವಾಗಿ ಹೇಳಿದರು.
ಕೆಂಪಣ್ಣ ವರದಿ ಬಿಡುಗಡೆ ಮಾಡಿ:
ಸಿದ್ದರಾಮಯ್ಯ ಅವರೂ ಕಾಂಗ್ರೆಸ್ ಸೇರಿದ ಮೇಲೆ ಪರಮ ಭ್ರಷ್ಟರಾಗಿದ್ದಾರೆ. ಮುಖ್ಯಮಂತ್ರಿ ತಾವು ಶುದ್ಧ ಹಸ್ತರು ಎನ್ನುತ್ತಾರೆ. ಹಾಗಿದ್ದರೆ ಅರ್ಕಾವತಿ ರಿಡು ಹಗರಣದಲ್ಲಿ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿ ನೋಡೋಣ ಎಂದು ಪ್ರಲ್ಹಾದ ಜೋಶಿ ಸಿಎಂಗೆ ಸವಾಲು ಹಾಕಿದರು.
