ಹಾಲುಮತದ ಸಮುದಾಯದ ಪ್ರಾಮಾಣಿಕತೆ, ಮುಗ್ದತೆ ಕೆಲವರ ರಾಜಕೀಯ ಲಾಭಕ್ಕೆ ದುರುಪಯೋಗ ಆಗಿದೆ: ಬಸವರಾಜ ಬೊಮ್ಮಾಯಿ

Basavaraj Bommai : ರೈತರು, ಹಾಲುಮತ ಸಮುದಾಯ, ಗಂಗಾಮತಸ್ಥರು, ಮೀನುಗಾರರು ಎಲ್ಲರೂ ದುಡಿದು ಬದುಕುವವರು. ಯಾರು ಭೂತಾಯಿ ಜೊತೆಗೆ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುತ್ತಾರೆ ಅವರು ಶ್ರಮಜಿವಿಗಳಾಗಿದ್ದಾರೆ. ತಮ್ಮ ಪ್ರಾಮಾಣಿಕತೆ ಮತ್ತು ಮುಗ್ದತೆ ಕೆಲವು ರಾಜಕಾರಣಿಗಳ ರಾಜಕೀಯ ಲಾಭಕ್ಕೆ ದುರುಪಯೋಗ ಆಗಿದೆ.

ಹಾವೇರಿ: ಹಾಲುಮತದ ಸಮುದಾಯದ ಪ್ರಾಮಾಣಿಕತೆ ಮತ್ತು ಮುಗ್ದತೆ ಕೆಲವರ ರಾಜಕೀಯ ಲಾಭಕ್ಕೆ ದುರುಪಯೋಗ ಆಗಿದೆ. ಈ ಸಮುದಾಯದ ಜೊತೆ ನಮ್ಮ ತಂದೆಯವರ ಕಾಲದಿಂದ ಸಂಬಂದ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಶಿಗ್ಗಾವಿ ತಾಲೂಕಿನ ಹಿರೇಮಣಿಕಟ್ಟಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಮೊದಲು ದೊಡ್ಡ ದೊಡ್ಡ ನಾಯಕರು ದೇಶ, ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಿ ಮತ ಕೇಳುತ್ತಿದ್ದರು. ಈಗ ಸುಳ್ಳು ಹೇಳಿ ಮತ ಪಡೆಯುವ ನಾಯಕರಿದ್ದಾರೆ. ಈಗ ಚುನಾವಣಾ ವ್ಯವಸ್ಥೆ ಬದಲಾಗಿದೆ ಎಂದು ಹೇಳಿದರು.

ರೈತರು, ಹಾಲುಮತ ಸಮುದಾಯ, ಗಂಗಾಮತಸ್ಥರು, ಮೀನುಗಾರರು ಎಲ್ಲರೂ ದುಡಿದು ಬದುಕುವವರು. ಯಾರು ಭೂತಾಯಿ ಜೊತೆಗೆ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುತ್ತಾರೆ ಅವರು ಶ್ರಮಜಿವಿಗಳಾಗಿದ್ದಾರೆ. ತಮ್ಮ ಪ್ರಾಮಾಣಿಕತೆ ಮತ್ತು ಮುಗ್ದತೆ ಕೆಲವು ರಾಜಕಾರಣಿಗಳ ರಾಜಕೀಯ ಲಾಭಕ್ಕೆ ದುರುಪಯೋಗ ಆಗಿದೆ. ಈ ಸಮುದಾಯದ ಜೊತೆ ನಮ್ಮ ತಂದೆಯವರ ಕಾಲದಿಂದ ಸಂಬಂದ ಇದೆ. ನಮ್ಮ ತಂದೆ ಹಾಲುಮತ ಸಮುದಾಯದ ಡಿ.ಕೆ.ಕಂಬಳಿ ಅವರ ವಿರುದ್ದ ಚುನಾವಣೆ ಗೆದ್ದಿದ್ದರು. ಆ ನಂತರ ಶಾಸಕರ ಭವನದಲ್ಲಿ ಇಬ್ಬರೂ ಒಂದೆ ರೂಮಿನಲ್ಲಿ ಇರುತ್ತಿದ್ದರು. ಆ ರೀತಿಯ ಸಂಬಂಧಗಳನ್ನು ಇಟ್ಟುಕೊಂಡು ಬಂದಿದ್ದರು ಎಂದು ಹೇಳಿದರು.

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಬಜೆಟ್ ಸಿದ್ದತೆ ಮಾಡುವಾಗ ಕರೆದು ಬಜೆಟ್ ಸಿದ್ದತೆ ಮಾಡಲು ಹೇಳಿದರು. ನಾನು ಬಜೆಟ್ ತಯಾರಿ ಕೆಲಸ ಮಾಡಿದೆ. ಆಗ ಸಿಎಂ ಯಡಿಯೂರಪ್ಪ ಅವರು ಅವರು ನಿನ್ನ ಕ್ಷೇತ್ರಕ್ಕೆ ಏನಾದರೂ ಅನುದಾನ ಕೇಳು ಅಂದರು, ನಾನು ಕನಕದಾಸರ ಬಾಡ ಅಭಿವೃದ್ಧಿಗೆ ಹಣ ಕೇಳಿದೆ. ಮತ್ತೇನು ಬೇಕು ಎಂದರು ನಾನು ಶಿಶುನಾಳ ಶರೀಫರ ಊರು, ಆಲೂರು ವೆಂಕಟರಾಯರ ಸ್ಮಾರಕ ಮಾಡಲು ಮನವಿ ಮಾಡಿದೆ. ಮೂರು ಕೋಟಿ ರೂ ಅನುದಾನ ನೀಡಿದರು. ಕನಕದಾಸರಿಗೂ ರಾಜಕೀಯ ಬಿಟ್ಟಿರಲ್ಲಿ ಅವರು ದಾಯಾದಿಗಳ ವಿರುದ್ದ ಸೋತಿದ್ದರು. ಅವರಿಗೆ ದೇವಿ ಪ್ರತ್ಯಕ್ಷವಾಗಿದ್ದಳು, ಅವರು ದಾಸರಾಗಿ ಆ ಒಂದು ಸೋಲಿನಲ್ಲಿ ನಾನು ನನ್ನನ್ನೇ ಕಂಡೆ, ನನಗೆ ನಾನೇ ಗೆದ್ದುಕೊಂಡೆ ಎಂದು ಹೇಳಿದರು.

ನಾನು ಹಿರೇ ಮಣಕಟ್ಟಿ ಊರಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಮನೆ ಕಟ್ಟಿಸಿದ್ದೇನೆ, ಸಿಎಂ ನೋಡಿದರೆ ಬೊಮ್ಮಾಯಿ ಒಂದೂ ಮನೆ ಕಟ್ಟಿಸಿಲ್ಲ ಎಂದು ಹೇಳುತ್ತಾರೆ. ಜನರ ಮಾತು ಸತ್ಯನಾ, ಸಿಎಂ ಮಾತು ಸತ್ಯನಾ ಎಂದು ಪ್ರಶ್ನಿಸಿದರು. ಯಾರೂ ಕಲ್ಪನೆ ಮಾಡಿರಲಿಲ್ಲ. ಇಲ್ಲಿಗೆ ವರದಾ ನದಿ ನೀರು ತಂದಿದ್ದೇನೆ‌

ನಾನು ಯಾವುದೇ ತಾರತಮ್ಯ ಮಾಡದೇ ಅಭಿವೃದ್ಧಿ ಮಾಡಿದ್ದೆನೆ. ಆ ಅಭಿವೃದ್ಧಿ ಮುಂದುವರೆಯಬೇಕು. ಅದಕ್ಕಾಗಿ ಭರತ್ ಬೊಮ್ಮಾಯಿಯನ್ನು ಗೆಲ್ಲಿಸಿ ಅಭಿವೃದ್ಧಿ ಕಾರ್ಯ ಮುಂದುವರೆಸಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೆಲೆ ಕ್ಷೇತ್ರದಲ್ಲಿ ಪೊಲಿಸ್ ಸ್ಟೇಷನ್ ಗೆ ಅಲೆದಾಡುವಂತೆ ಮಾಡಿದ್ದಾರೆ. ಎಲ್ಲದಕ್ಕೂ ಜನರು ಪೊಲಿಸ್ ಸ್ಟೇಷನ್ ಗೆ ಅಲೆಯುವಂತಾಗಿದೆ. ಇದನ್ನು ತಪ್ಪಿಸಿ ಕ್ಷೇತ್ರದಲ್ಲಿ ಶಾಂತಿಯ ವಾತಾವರಣ ಮೂಡಿಸುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ ಹಾಜರಿದ್ದರು.

Author

error: