ಕಾರವಾರ : ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸಂಕಷ್ಟದ ಮೇಲೆ ಸಂಕಷ್ಟ, ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸವಾಲಿನ ಮೇಲೆ ಸವಾಲು ಎದುರಾಗಿದೆ.
ಬಿಜೆಪಿ ಸಂಸತ್ ಸದಸ್ಯ ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ತಪ್ಪಿಸಿದಾಗಲೇ ಬಿಜೆಪಿಗೆ ಸಮಸ್ಯೆ ಪ್ರಾರಂಭ. ಕಟ್ಟಾ ಹಿಂದುತ್ವವಾದಿಗಳ ಮುನಿಸು. ಅನಂತಕುಮಾರ್ ಹೆಗಡೆ ಕೆಲವು ದಿನಗಳ ಕಾಲ ಮನೆಯ ಬಾಗಿಲು ಹಾಕಿಕೊಂಡು ಕುಳಿತು ಬಿಟ್ಟರು.
ವಿಶ್ವೇಶ್ವರ ಹೆಗಡೆ ಅವರು ಅನಂತಕುಮಾರ್ ಹೆಗಡೆಯವರ ಮನವೊಲಿಸಲು ನಡೆಸಿದ ಯತ್ನ ಸಫಲವಾಗಲಿಲ್ಲ.
ಅನಂತಕುಮಾರ್ ಹೆಗಡೆ, ವಿಶ್ವೇಶ್ವರ ಹೆಗಡೆ ಅವರ ಜೊತೆ ಮಾತನಾಡುವುದಕ್ಕೂ ಸಿದ್ದರಿರಲಿಲ್ಲ.
ಹಾಗೆ ನೋಡಿದರೆ ಅನಂತಕುಮಾರ್ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆ ಅವರ ಸಂಬಂಧ ಕೆಟ್ಟು ಯಾವುದೋ ಕಾಲವಾಯಿತು.
ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲೂ ವಿಶ್ವೇಶ್ವರ ಹೆಗಡೆ ಅವರಿಗೆ ಅನಂತಕುಮಾರ್ ಹೆಗಡೆ ಅವರ ಬೆಂಬಲ ಸಿಗಲಿಲ್ಲ. ಕೊನೆಗೆ ವಿಶ್ವೇಶ್ವರ ಹೆಗಡೆ ಸೋತರು. ಈಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಪಕ್ಷದಲ್ಲಿ ಸಕ್ರಿಯರಾಗಿಲ್ಲ. ಅವರು ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಪಕ್ಷದ ಯಾವುದೇ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಳ್ಳುತ್ತಿಲ್ಲ.
ಈ ನಡುವೆ ಶಿವರಾಮ್ ಹೆಬ್ಬಾರ್ ಅವರ ಪುತ್ರ ವಿವೇಕ್ ಹೆಬ್ಬಾರ್ ಕಾಂಗ್ರೆಸ್ ಸೇರಿದರು. ಇದರ ಅರ್ಥ ಶಿವರಾಮ್ ಹೆಬ್ಬಾರ್ ಕೂಡ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ನಿಶ್ಚಿತ, ಇದು ವಿಶ್ವೇಶ್ವರ ಹೆಗಡೆ ಅವರ ಸಮಸ್ಯೆಯನ್ನು ಉಲ್ಬಣಗೊಳಿಸಿದೆ.
ಬಿಜೆಪಿ ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಮೊದಲ ಬಾರಿಗೆ ಶಿವರಾಮ್ ಹೆಬ್ಬಾರ್ ಅವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೆಬ್ಬಾರ್ ಅವರ ಈ ನಡೆ ಸರಿಯಾದುದಲ್ಲ ಎಂದಿದ್ದಾರೆ.
ಈ ಬೆಳವಣಿಗೆಗಳನ್ನು ನೋಡಿದರೆ ಬಿಜೆಪಿಗೆ ಈ ಬಾರಿ ಪರಿಸ್ಥಿತಿ ಸುಲಭವಾಗಿಲ್ಲ.






