ಬೆಂಗಳೂರು : ಕೃಷಿ ಕ್ಷೇತ್ರ ಸದೃಢವಾದರೆ ಮಾತ್ರ ದೇಶದ ಸುಸ್ಥಿರ ಅಭಿವೃದ್ಧಿ ಸಾಧ್ಯ. ಕೃಷಿ ವಿಶ್ವವಿದ್ಯಾನಿಲಯ ಈ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸಬೇಕಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಇಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಜಿಕೆವಿಕೆಯಲ್ಲಿ ಹಮ್ಮಿಕೊಂಡಿದ್ದ 59 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಭಾರತದ ಬೆನ್ನೆಲುಬು ಕೃಷಿ. ಶೇಕಡ 70% ರಷ್ಟು ರೈತರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ವೈಜ್ಞಾನಿಕ ತಂತ್ರಜ್ಞಾನ ಪರಿಚಯಿಸುವುದು ಕೃಷಿ ವಿಶ್ವವಿದ್ಯಾನಿಲಯದ ಕರ್ತವ್ಯ. ಕೇಂದ್ರ ಮತ್ತು ರಾಜ್ಯದ ಸರ್ಕಾರದ ಪ್ರೊತ್ಸಾಹದಿಂದ ಕೃಷಿ ಕ್ಷೇತ್ರ ಅಭಿವೃದ್ಧಿ ಹೊಂದಿ ದೇಶವು ಸಬಲೀಕರಣವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೃಷಿ ಕ್ಷೇತ್ರಕ್ಕೆ ಹಚ್ಚಿನ ಆದ್ಯತೆ ಜೊತೆಗೆ ತಾಂತ್ರಿಕ, ವೈಜ್ಞಾನಿಕ ನೆರವು ಅಗತ್ಯತೆ ಇದೆ. ರಾಜ್ಯ ಸರ್ಕಾರ ಈ ಬಗ್ಗೆ ವಿಶೇಷ ಗಮನ ಹರಿಸಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಾಗುತ್ತಿರಬೇಕು. ಸುಧಾರಿತ ತಳಿಗಳು, ಯಂತ್ರೋಪಕರಣಗಳನ್ನು ಕಂಡು ಹಿಡಿದು ಸುಲಭವಾಗಿ ರೈತರಿಗೆ ತಲುಪಿಸುವ ಹಾಗೂ ಕೃಷಿ ಪೂರಕ ಚಟುವಟಿಕೆಗಳಿಗೆ ಬಲ ತುಂಬುವ ಕೆಲಸ ಮಾಡಬೇಕು ಎಂದರು.
ರಾಜ್ಯದ ಅಭಿವೃದ್ಧಿಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಕೂಡ ಅವರ ದೂರ ದೃಷ್ಠಿ ಚಿಂತನೆ ಫಲ. ರಾಜ್ಯದ ಕೃಷಿ, ಕೈಗಾರಿಕೆ, ನೀರಾವರಿ, ವಿಜ್ಞಾನ ತಂತ್ರಜ್ಞಾನದ ಅಭ್ಯುದಯಕ್ಕೆ ಮೈಸೂರು ಅರಸರು ಹಾಗೂ ಮಹಾರಾಣಿ ಕೆಂಪ ನಂಜಮ್ಮಣ್ಣಿ ಉದಾರವಾಗಿ ನೀಡಿರುವ ನೆರವು ಸ್ಮರಣೀಯ ಎಂದು ಸಚಿವರು ಹೇಳಿದರು.
ದೇಶದ ಪ್ರತಿಷ್ಠಿತ ಕೃಷಿ ವಿಶ್ವ ವಿದ್ಯಾನಿಲಯಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹೊಸ ಕೃಷಿ ಸಂಶೋಧನೆಗಳು ಹಾಗೂ ಅವುಗಳನ್ನು ರೈತರಿಗೆ ತಲುಪಿಸುವಲ್ಲಿಯೂ ಅಗ್ರ ಸ್ಥಾನದಲ್ಲಿರುವುದು ಅಭಿನಂದನೀಯ ಎಂದು ತಿಳಿಸಿದರು.
ಕೃಷಿ ಪದವಿಧರರು ಸ್ವ-ಉದ್ಯೋಗದÀ ಮೂಲಕ ಇತರರಿಗೆ ಕೆಲಸ ನೀಡುವಂತಾಗಬೇಕು. ಅಮೇರಿಕಾ ಪ್ರವಾಸದ ವೇಳೆ ಕೃಷಿ ಯಾಂತ್ರೀಕರಣದ ಗುಣಾತ್ಮಕ ಪರಿಣಾಮಗಳನ್ನು ಗಮನಸಿದ್ದು ಇಲ್ಲಿಯೂ ಅವುಗಳನ್ನು ಅನುಷ್ಠಾನಕ್ಕೆ ಯೋಜನೆ ರೂಪಿಸಾಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹೊಸ ಲೋಗೋ, ಹೊಸ ತಂತ್ರಾಂಶಗಳನ್ನು ಸಚಿವರು ಅನಾವರಣ ಮಾಡಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಉಪ ಕುಲಪತಿ ಸುರೇಶ್ ಅವರು ಮಾತನಾಡಿ, ಭಾರತ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯದಲ್ಲಿ ಕೃಷಿ ವಿಶ್ವವಿದ್ಯಾನಿಲಯವು ಮೊದಲನೇ ರ್ಯಾಂಕ್ ಪಡೆದಿರಬೇಕಿತ್ತು. ಆದರೆ 11ನೇ ರ್ಯಾಂಕ್ ಪಡೆದಿದೆ. ಇದರ ಕುರಿತು ಆತ್ಮಾವಲೋಕನ ಮಾಡಿ ಮುಂದಿನ ದಿನಗಳಲ್ಲಿ ಮೊದಲನೆ ರ್ಯಾಂಕ್ಗೆ ಬರಲು ಪ್ರಯತ್ನಿಸಬೇಕು. ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃಷಿ ಸಂತೆ, ವಿವಿಧ ಕಾರ್ಯಕ್ರಮಗಳು ಸಮಾಜದ ಹಲವಾರು ಜನರಿಂದ ಅಭಿನಂದಿಸಲ್ಪಟ್ಟಿದೆ, ಎಂದು ತಿಳಿಸಿದರು.
ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಉಪ ಮಹಾ ನಿರ್ದೇಶಕ ಡಾ. ರಾಘವೇಂದ್ರ ಭಟ್ಟ ಅವರು ಮಾತನಾಡಿ. ಯುವ ಪೀಳಿಗೆಯು ಕಠಿಣ ಪರಿಶ್ರಮ, ಆಳವಾದ ಅಧ್ಯಯನದಿಂದ ಸಂಶೋಧನೆ ಮಾಡಿದಾಗ ಯಶಸ್ಸನ್ನು ಕಾಣಲು ಸಾಧ್ಯ. ಹೊಸ ತಂತ್ರಜ್ಞಾದ ಕುರಿತು ಮಾಹಿತಿಯನ್ನು ತಿಳಿದುಕೊಂಡಿರಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು.
