ಲೈಂಗಿಕ ದೌರ್ಜನ್ಯದ ಆರೋಪ ಬಂದಿದ್ದು ನಮ್ಮ ಕುಟುಂಬವನ್ನು ದುರ್ಬಲಗೊಳಿಸುವ ಷಡ್ಯಂತ್ರ : MLC ಸೂರಜ್ ರೇವಣ್ಣ

MLC Suraj Revanna : ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣವನ್ನು ಎಸ್ ಐಟಿ ತನಿಖೆಗೆ ವಹಿಸಲಾಗಿದೆ. ಏನು ಸಾಬೀತುಪಡಿಸಬೇಕೋ ಅದು ಅಲ್ಲಿ ಸಾಬೀತಾಗುತ್ತದೆ.

ಹಾಸನ : ತಮ್ಮ ಸಹೋದರ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ತಮ್ಮ ಕುಟುಂಬವನ್ನು ರಾಜಕೀಯವಾಗಿ ದುರ್ಬಲಗೊಳಿಸುವ ಷಡ್ಯಂತ್ರವಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಹಾಗೂ ಪ್ರಜ್ವಲ್ ರೇವಣ್ಣ ಅವರ ಸಹೋದರ ಸೂರಜ್ ರೇವಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಹೆಚ್. ಡಿ. ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳು ರಾಜಕೀಯವಾಗಿ ದುರ್ಬಲಗೊಳಿಸುವ ಸಂಚು ಎಂದು ಬಣ್ಣಿಸಿದರು. ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣವನ್ನು ಎಸ್ ಐಟಿ ತನಿಖೆಗೆ ವಹಿಸಲಾಗಿದೆ. ಏನು ಸಾಬೀತುಪಡಿಸಬೇಕೋ ಅದು ಅಲ್ಲಿ ಸಾಬೀತಾಗುತ್ತದೆ. ನಾನು ಹೇಗೆ ಅದಕ್ಕೆ ಪ್ರತಿಕ್ರಿಯಿಸಲು ಸಾಧ್ಯ ? ಎಂದು ಸೂರಜ್ ರೇವಣ್ಣ ಹೇಳಿದರು.

ತಮ್ಮ ತಂದೆ ಹೆಚ್ ಡಿ ರೇವಣ್ಣ ವಿರುದ್ಧವೂ ಎಫ್‌ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಇನ್ನೂ ಸಾವಿರ ಎಫ್ ಐಆರ್ ಹಾಕಲಿ, ಸಾಬೀತು ಮಾಡಬೇಕಾಗಿರುವುದು ಅಂತಿಮವಾಗಿ ಸಾಬೀತಾಗುತ್ತದೆ. ರೇವಣ್ಣ ಏನು ಎಂಬುದು ನಮ್ಮ ತಾಲ್ಲೂಕು ಮತ್ತು ಜಿಲ್ಲೆಯ ಜನರಿಗೆ ತಿಳಿದಿದೆ. ಇದರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ರಾಜಕೀಯ ದುರುದ್ದೇಶದಿಂದ ಯಾರು ಏನು ಬೇಕಾದರೂ ಮಾಡಬಹುದು. ಹಾಸನ ರಾಜಕೀಯ ತೆಗೆದುಕೊಂಡರೆ ರೇವಣ್ಣ ಅವರಿಗೆ ರಾಜಕೀಯ ಸ್ಪರ್ಧಿ ಯಾರು ಇಲ್ಲ. ಅವರಂತೆ ರಾಜಕೀಯ ಮಾಡಿದವರು ಯಾರೂ ಇಲ್ಲ. ಅವರನ್ನು ದುರ್ಬಲಗೊಳಿಸಲು ಹೀಗೆಲ್ಲಾ ಕುತಂತ್ರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಲೈಂಗಿಕ ಹಗರಣ ಬೆಳಕಿಗೆ ಬಂದ ನಂತರ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಒಂದು ರೀತಿಯ ಗೊಂದಲದಲ್ಲಿದ್ದಾರೆ ಎಂದು ತೋರುತ್ತಿದೆಯೇ ಎಂಬ ಪ್ರಶ್ನೆಗೆ, ಯಾವುದೇ ಗೊಂದಲವಿಲ್ಲ. ನಿನ್ನೆ ಕೂಡ ಚುನಾವಣೆಯ ನಂತರ ಪರಿಸ್ಥಿತಿಯನ್ನು ಅವಲೋಕಿಸಲು ಸಭೆಗಳು ನಡೆದಿವೆ. ನೂರಕ್ಕೆ ನೂರರಷ್ಟು ಪ್ರಜ್ವಲ್ ರೇವಣ್ಣ ಗೆಲ್ಲುತ್ತಾರೆ.” “ಯಾರಾದರೂ ಏನು ಬೇಕಾದರೂ ವಿಧಿಸಲಿ, ಎಸ್‌ಐಟಿ ತನಿಖೆಯಿಂದ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ” ಎಂದು ಅವರು ಹೇಳಿದರು.

Author

error: