ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ನಾವೀನ್ಯತಾ ಕ್ಷೇತ್ರಕ್ಕೆ ಕೊಡುಗೆ ನೀಡಲು ಅಮೆರಿಕದ ಕಂಪನಿಗಳಿಗೆ ಸಚಿವ ಎಂ. ಬಿ. ಪಾಟೀಲ ಆಹ್ವಾನ
Minister M b Patil : ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಾವೀನ್ಯತಾ ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಲಕ ಕರ್ನಾಟಕದ ಬೆಳವಣಿಗೆಯ ಪಯಣದಲ್ಲಿ ಭಾಗಿಯಾಗಬೇಕು ಎಂದು ಲ್ಯಾಬ್ ಸೆಂಟ್ರಲ್ಗೆ ಆಹ್ವಾನ ನೀಡಿದ್ದಾರೆ
ಬೆಂಗಳೂರು: ʼಕರ್ನಾಟಕದ ಆರೋಗ್ಯ, ಜೈವಿಕ ತಂತ್ರಜ್ಞಾನ, ವೈಮಾಂತರಿಕ್ಷ, ರಕ್ಷಣೆ ಮತ್ತು ಉನ್ನತ ಶಿಕ್ಷಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರದ ಜೊತೆ ಸಹಯೋಗ ಸಾಧಿಸಲು ಅಮೆರಿಕದ ಲ್ಯಾಬ್ ಸೆಂಟ್ರಲ್ ಮತ್ತು ಕೇಂಬ್ರಿಡ್ಜ್ ಇನ್ನೋವೇಷನ್ ಸೆಂಟರ್ಗೆ ಆಹ್ವಾನ ನೀಡಲಾಗಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ.
ಅಮೆರಿಕದ ಅಧಿಕೃತ ಪ್ರವಾಸದಲ್ಲಿ ಇರುವ ಸಚಿವರು, ರಾಜ್ಯ ಸರ್ಕಾರ ಇತ್ತೀಚೆಗೆ ಚಾಲನೆ ನೀಡಿರುವ ಕ್ವಿನ್ ಸಿಟಿ ಯೋಜನೆಯಲ್ಲಿ ಅಮೆರಿಕದ ಪ್ರಮುಖ ಕಂಪನಿಗಳು ಭಾಗವಹಿಸುವ ಸಾಧ್ಯತೆಗಳನ್ನು ವಿವರವಾಗಿ ಚರ್ಚಿಸಿದ್ದಾರೆ.
ಲ್ಯಾಬ್ ಸೆಂಟ್ರಲ್ನ ಸಿಒಒ ಪೀಟ್ ಶಾನ್ಲಿ ಅವರನ್ನು ಭೇಟಿ ಮಾಡಿರುವ ಸಚಿವರು ಕ್ಬಿನ್ ಸಿಟಿಯಲ್ಲಿ ಔಷಧ ತಯಾರಿಕೆ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮಗಳನ್ನು ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಿದ್ದಾರೆ.
ಕ್ಬಿನ್ ಸಿಟಿಯ ಜೀವ ವಿಜ್ಞಾನ ಜಿಲ್ಲೆಯ ಬಗ್ಗೆ ಸಚಿವರು ಅಮೆರಿಕದ ಕಂಪನಿಗಳ ಜೊತೆಗೆ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಾವೀನ್ಯತಾ ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಲಕ ಕರ್ನಾಟಕದ ಬೆಳವಣಿಗೆಯ ಪಯಣದಲ್ಲಿ ಭಾಗಿಯಾಗಬೇಕು ಎಂದು ಲ್ಯಾಬ್ ಸೆಂಟ್ರಲ್ಗೆ ಆಹ್ವಾನ ನೀಡಿದ್ದಾರೆ.
ಕೇಂಬ್ರಿಡ್ಜ್ ಇನ್ನೋವೇಶನ್ ಸೆಂಟರ್ (ಸಿಐಸಿ) ನ ಸಿಇಒ ಟಿಮ್ ರೋವ್ ಅವರ ಜೊತೆಗಿನ ಸಭೆಯಲ್ಲಿ, ಕರ್ನಾಟಕದಲ್ಲಿ ಆವಿಷ್ಕಾರಗಳನ್ನು ಮತ್ತು ನವೋದ್ಯಮಗಳನ್ನು ಉತ್ತೇಜಿಸುವ ಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ರಾಜ್ಯದಲ್ಲಿ ಬಯೋಜೆನ್ ಕಂಪನಿಯ ವಿಸ್ತರಣೆಯ ಅವಕಾಶಗಳನ್ನೂ ಪ್ರಮುಖವಾಗಿ ಚರ್ಚಿಸಲಾಗಿದೆ.
ಬೆಂಗಳೂರಿನಲ್ಲಿ ಮುಂದಿನ ವರ್ಷ ನಡೆಯಲಿರುವ ಬಂಡವಾಳ ಹೂಡಿಕೆ ಶೃಂಗಸಭೆ ʼಇನ್ವೆಸ್ಟ್ ಕರ್ನಾಟಕʼದಲ್ಲಿ ಭಾಗವಹಿಸುವಂತೆ ಸಚಿವರು ಸಿಐಸಿ-ಗೆ ಔಪಚಾರಿಕ ಆಹ್ವಾನ ನೀಡಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಡಾ. ಮಹೇಶ್ ಅವರು ಸಚಿವರು ನಡೆಸಿದ ಸಭೆ – ಸಮಾಲೋಚನೆಗಳಲ್ಲಿ ಭಾಗವಹಿಸಿದ್ದರು.
