ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ನಿಗಮದ ಕೇಂದ್ರ ಕಛೇರಿಯ ಅಧೀಕ್ಷಕರಾದ ಚಂದ್ರಶೇಖರ್ ರವರ ಆತ್ಮಹತ್ಯೆ ಪ್ರಕರಣ ನನಗೆ ಅತೀವ ನೋವು ತಂದಿದೆ. ಈ ಹಣ ದುರುಪಯೋಗ ಪ್ರಕರಣದಲ್ಲಿ ನಮ್ಮ ಇಲಾಖೆ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಯಾರೇ ಇರಲಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಬಿ. ನಾಗೇಂದ್ರ ಅವರು ತಿಳಿಸಿದರು.
ಮಂಗಳವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮುಖ್ಯ ಖಾತೆಯಲ್ಲಿ ಹಿಂದಿನ ಸಾಲಿನ ಹಾಗೂ 2024-25 ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ಮೊತ್ತದಲ್ಲಿ 88 ಕೋಟಿ ಹಣವನ್ನು ನನಗೆ ಹಾಗೂ ನಿಗಮದ ಅಧ್ಯಕ್ಷರ ಗಮನಕ್ಕೂ ಬಾರದೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂ.ಜಿ ರಸ್ತೆಯ ಶಾಖೆಯ ಅನಧಿಕೃತ ಖಾತೆಗೆ ವರ್ಗಾವಣೆ ಆಗಿರುತ್ತದೆ. ನಿನ್ನೆ ಪ್ರಕರಣ ಬೆಳಕಿಗೆ ಬಂದ ನಂತರ ಇಲಾಖೆ ಅಧಿಕಾರಗಳು ಕೂಡ ಇದು ನಮಗೆ ಯಾವುದೇ ರೀತಿಯ ಮಾಹಿತಿ ಇಲ್ಲದೆ ದುರುಪಯೋಗ ಆಗಿದೆ ಎಂದು ತಿಳಿಸಿದ್ದಾರೆ.
ಇನ್ನು ವಾಲ್ಮೀಕಿ ನಿಗಮದ MD ಜೆ. ಜೆ. ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರುಶುರಾಮ್ ಹಾಗೂ ಬ್ಯಾಂಕ್ ವ್ಯವಸ್ಥಾಪಕಿ ಶುಚಿಸ್ಮಿತಾ 3 ಜನ ನನ್ನ ಸಾವಿಗೆ ನೇರ ಕಾರಣರಾದವರು ಎಂದು ಸಾವಿನ ಹೇಳಿಕೆ ಪತ್ರದಲ್ಲಿ ಇದ್ದು ಈ ಕುರಿತು ನಿನ್ನೆ ಆರ್ಥಿಕ ಇಲಾಖೆಯ ಮುಖ್ಯ ಅಧಿಕಾರಿಗಳ ತಂಡ ನಿಗಮದ ಕೇಂದ್ರ ಕಚೇರಿಗೆ ತೆರಳಿ ಎಲ್ಲಾ ಲೆಕ್ಕಪತ್ರಗಳನ್ನು ಸುಧೀರ್ಘವಾಗಿ ಪರಿಶೀಲನೆ ನಡೆಸಿದ ವೇಳೆ ನಿಗಮದ ಅಧಿಕಾರಿಗಳಿಗೆ ತಿಳಿಯದ ನಕಲು ಸಹಿ ಬಳಸಿ ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಿದೆ ಎಂದರು.
ಈಗಾಗಲೇ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನಿಗಮದ ಎಂ. ಡಿ. ಪದ್ಮನಾಭ ಅವರಿಂದ ನಿನ್ನೆ ಸರ್ಕಾರಕ್ಕೆ ವರದಿ ಪಡೆದಿದ್ದು ನಿನ್ನೆ ಮುಖ್ಯಮಂತ್ರಿಗಳು ಇದರ ಬಗ್ಗೆ ವರದಿ ಪರಿಶೀಲನೆ ನಡೆಸಿದ್ದಾರೆ, ಇದರ ಬಗ್ಗೆ ಬ್ಯಾಂಕ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಆದರೆ FSL ವರದಿ ಬಂದರೆ ಸಹಿ ನಕಲು ಆಗಿದೆಯಾ ಅಥವಾ ಇವರೇ ಈ ಪ್ರಕರಣದಲ್ಲಿ ಶಾಮಿಲು ಆಗಿದ್ದಲ್ಲಿ ಕೆಲಸದಿಂದ ವಜಾಗೊಳಿಸಿ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಸರ್ಕಾರವು ಯಾವುದೇ ಇಂತಹ ಪ್ರಕರಣಗಳನ್ನು ಸಹಿಸಿಕೊಳ್ಳಲ್ಲ. ಇನ್ನು ನಾನು ಕೂಡ ಈಗಾಗಲೇ ಈ ಪ್ರಕರಣದಲ್ಲಿ ದುರುಪಯೋಗ ಆಗಿರುವ ಎಲ್ಲಾ ಹಣವನ್ನು ವಾಪಾಸ್ ನಿಗಮದ ಖಾತೆಗೆ ಪಡೆದುಕೊಳ್ಳಲು ಬ್ಯಾಂಕ್ ಗೆ ಅಂತಿಮ ಗಡುವು ನೀಡಿ ಎಂದು ನಿನ್ನೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ ಎಂದು ತಿಳಿಸಿದರು.
ಈಗಾಗಲೇ 88 ಕೋಟಿ ಹಣದ ಪೈಕಿ 28 ಕೋಟಿ ಹಣವು ನಮ್ಮ ನಿಗಮದ ಖಾತೆಗೆ ಮರುಪಾವತಿ ಆಗಿದೆ ಇನ್ನುಳಿದ ಸುಮಾರು 60ಕೋಟಿ ಹಣವನ್ನು ಅತೀ ಶೀಘ್ರದಲ್ಲಿ ವಾಪಸ್ ಪಡೆಯುತ್ತೇವೆ ಬಡವರ ಕಲ್ಯಾಣಕ್ಕೆ ಮಿಸಲಿಟ್ಟ ಹಣವನ್ನು ಕಾನೂನು ಬಾಹಿರವಾಗಿ ಯಾರು ಪಡೆಯದಂತೆ ಕಾಪಾಡುವುದು ನನ್ನ ಹಾಗೂ ನಿಗಮದ ಅಧ್ಯಕ್ಷರ ಆದ್ಯ ಕರ್ತವ್ಯವಾಗಿದೆ ಎಂದರು.
ಈಗಾಗಲೇ CID ಅಧಿಕಾರಿಗಳು ವರದಿ ಪಡೆಯಲು ತನಿಖೆ ಶುರುಮಾಡಿದ್ದು. ವರದಿ ನಮ್ಮ ಸರ್ಕಾರಕ್ಕೆ ಸಲ್ಲಿಕೆಯಾದ ತಕ್ಷಣವೇ ಈ ಪ್ರಕರಣದಲ್ಲಿ ಯಾರು ಆರೋಪಿ ಎಂದು ಸಾಬೀತು ಅವರನ್ನು ಕೆಲಸದಿಂದ ವಜಾಗೊಳಿಸಿ ಕಾನೂನಿನ ಅಡಿಯಲ್ಲಿ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.






