ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ….. ನಿಜ ಪ್ರತಿ ವರ್ಷಯುಗಾದಿ ಬರುತ್ತದೆ. ಯುಗಾದಿ ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಮೊದಲ ದಿನ. ಈ ಹಬ್ಬದ ಆಚರಣೆಯೂ ವಿಶಿಷ್ಟ. ಪ್ರಾಯಶ: ವಿಶ್ವದ ಎಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಈ ರೀತಿ ಇರುವುದಿಲ್ಲ.
ಹೊಸ ವರ್ಷಕ್ಕೆ ಹೊಸತನ್ನು ಸ್ವಾಗತಿಸುವ ಸಂಭ್ರಮ. ಹಾಗೆ ಬದುಕು ಎಂದರೆ ಸಿಹಿ ಕಹಿ ಎರಡೂ ಇರುತ್ತದೆ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಅದಕ್ಕಾಗಿ ಸಿಹಿ ಕಹಿ ಎರಡನ್ನೂ ಸ್ವೀಕರಿಸುವ ಸಂಪ್ರದಾಯ.
ಯುಗಾದಿ ಎಂದರೆ ಯುಗದ ಆದಿ. ಆಥವಾ ಹೊಸ ವರ್ಷದ ಪ್ರಾರಂಭ. ಅದಕ್ಕಾಗಿ ಬೇವು ಬೆಲ್ಲ ಎರಡೂ ಬೇಕು. ಸಹಿ ಕಹಿಯ ಮಿಶ್ರಣ..
ಭಾರತದಲ್ಲಿ ಯುಗಾದಿ ಹಬ್ಬವೆಂದರೆ ಬಹಳ ವಿಶೇಷ, ವಿಜೃಂಭಣೆ. ಯುಗಾದಿ ಹಬ್ಬದ ದಿನದಿಂದ ಹೊಸ ಸಂವತ್ಸರ. ಈ ಹಬ್ಬದಂದು ಬೇವು ಬೆಲ್ಲ ಹಂಚಿ, ವಿವಿಧ ಖಾದ್ಯಗಳನ್ನು ತಯಾರಿಸುವ ಉತ್ಸಾಹ. ಮನೆಯನ್ನು ಅಲಂಕರಿಸುವ ಸಂಭ್ರಮ.
ದೇವಾಲಯಗಳಲ್ಲಿ ವಿಶೇಷ ಪೂಜೆ, ಭಕ್ತರ ದರ್ಶನ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜೆ-ಪುನಸ್ಕಾರಗಳು ಮುಂಜಾನೆಯಿಂದಲೇ ನಡೆಯುತ್ತಿದೆ. ಮನೆಗಳಲ್ಲಿ ಹೆಂಗಳೆಯರು, ಮಕ್ಕಳು ಬೆಳಗ್ಗೆಯೇ ಎದ್ದು ಮನೆ ಮುಂದೆ ನೀರು ಹಾಕಿ ರಂಗೋಲಿ ಇಟ್ಟು ಮನೆ, ದೇವರ ಮನೆಯನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಹೊಸ ಉಡುಗೆ ತೊಟ್ಟು ಯುಗಾದಿ ಸಂಭ್ರಮಕ್ಕೆ ತೊಡಗುತ್ತಿದ್ದಾರೆ..
ಈ ಬಾರಿ ಬೇಸಿಗೆಯ ಬಿರುಬಿಸಿಲು .ಅದರ ಜೊತೆ ಮಾರುಕಟ್ಟೆಯಲ್ಲಿ ತರಕಾರಿ, ಹೂವು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ. ಆದರೆ ಹಬ್ಬ ಆಚರಣೆ ನಿಲ್ಲಿಸುವಂತಿಲ್ಲ. ಆಚರಿಸಲೇ ಬೇಕು.
ಬೆಲೆ ಏರಿಕೆ ಬಿಸಿಲಿನ ನಡುವೆ ನಡೆಯುತ್ತಿರುವ ಯುಗಾದಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಹೊಸತು ಹೊಸತು ಬದುಕಿನಲ್ಲಿ ಬರಲಿ. ಕಹಿಗಿಂತ ಸಿಹಿ ಹೆಚ್ಚಾಗಿರಲಿ.
