ಬೆಂಗಳೂರು: ಹರಿಯಾಣದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದಿರುವುದು ಇಡಿ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ದಿಕ್ಸೂಚಿ ಯಾಗಿದೆ. ಕಾಂಗ್ರೆಸ್ ನ ಜಾತಿ ರಾಜಕಾರಣವನ್ನು ಹರಿಯಾಣ ಜನರು ತಿರಸ್ಕಾರ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಸ್ಥಳೀಯವಾಗಿ ಪಕ್ಷದ ಸಂಘಟನಾ ಶಕ್ತಿ ಕಾರಣ‌. ಲೋಕಸಭೆ ಚುನಾವಣೆಯ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ರಾಜಧಾನಿ ದೆಹಲಿಗೆ ಹತ್ತಿರ ಇರುವ ರಾಜ್ಯದ ಚುನಾವಣೆ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ. ಕಾಂಗ್ರೆಸ್ ನ ಜಾತಿ ರಾಜಕಾರಣವನ್ನು ಹರಿಯಾಣದ ಜನತೆ ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ನವರು ಬಿಜೆಪಿಯನ್ನು ಸಂವಿಧಾನ ವಿರೋಧಿ ಎಂದು ಬಿಂಬಿಸಲು ಪ್ರಯತ್ನ ಮಾಡಿದರು. ಆದರೆ, ಜನರು ಸಬ್ ಕೆ ಸಾತ್ ಸಬ್ ಕಾ ವಿಕಾಸ್, ಶ್ರೇಷ್ಠ ಭಾರತ, ಅಮೃತ ಕಾಲ ವಿಚಾರಗಳಿಗೆ ಜನರು ಬೆಂಬಲ ಕೊಟ್ಟಿದ್ದಾರೆ. ಮಹಾರಾಷ್ಡದಲ್ಲಿಯೂ ಇದೆ ರೀತಿಯ ಫಲಿತಾಂಶ ಬರುವ ವಿಶ್ವಾಸ ಇದೆ‌ ಎಂದು ಹೇಳಿದರು.

ಇನ್ನು ಜಮ್ಮು ಕಾಶ್ಮೀರ ಸಾಮಾಜಿಕವಾಗಿ ಸೂಕ್ಷ ರಾಜ್ಯ ಅಲ್ಲಿ ಕಣಿವೆ ಹೊರಗೆ ನಮಗೆ ಬೆಂಬಲ ಸಿಕ್ಕಿದೆ. ಇನ್ನೂ ರಾಜಕಾರಣ ಇದೆ. ಇದೇ ಅಂತಿಮ ಅಲ್ಲ. ಹರಿಯಾಣದಲ್ಲಿನ ಸೋಲಿನ ಬಗ್ಗೆ ಕಾಂಗ್ರೆಸ್ ಗೌರವಯುತವಾಗಿ ಒಪ್ಪಿಕೊಂಡರೆ ಗೌರವ ಕೊಡುತ್ತೇವೆ, ಕುಂಟು ನೆಪ ಹೇಳಿದರೆ ಎದುರು ಉತ್ತರ ಕೊಡುತ್ತೇವೆ ಎಂದು ಹೇಳಿದರು.

ಒಳ ಮೀಸಲಾತಿಯಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ :

ಜಾತಿ ಗಣತಿ ಹಾಗೂ ಒಳ ಮೀಸಲಾತಿ ಬಗ್ಗೆ ಬಿಜೆಪಿ ನಿಲುವಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಳ ಮೀಸಲಾತಿ ವಿಚಾರದಲ್ಲಿ ನಮ್ಮದು ಸ್ಪಷ್ಟ ನಿಲುವಿದೆ. ನಾವು ಎಲ್ಲರಿಗೂ ನ್ಯಾಯ ಕೊಡಿಸುವ ಶಿಫಾರಸ್ಸು ಮಾಡಿದ್ದೇವೆ. ಕಾಂಗ್ರೆಸ್ ನವರು ಡಬಲ್ ಗೇಮ್ ಆಡುತ್ತಿದ್ದಾರೆ. ಮೊದಲು ಸಂವಿಧಾನ‌ ತಿದ್ದುಪಡಿ ಆದ ಮೇಲೆ ಮಾಡುತ್ತೇವೆ ಅಂತ ಕಣ್ಣೊರೆಸುವ ತಂತ್ರ ಮಾಡಿದರು. ಈಗ ಸುಪ್ರೀಂ ಕೋರ್ಟ್ ಆದೇಶ ಬಂದ ಮೇಲೆ ಚರ್ಚೆ ಮಾಡುತ್ತೇವೆ ಅಂತ ಹೇಳುತ್ತಾರೆ. ಅವರಿಗೆ ದಲಿತರಾಗಲಿ ಹಿಂದುಳಿದವರಾಗಲಿ ಅಭಿವೃದ್ಧಿ ಆಗುವುದು ಬೇಡ ಎಂದರು.

ಜಾತಿ ಗಣತಿ ವಿಚಾರದಲ್ಲಿಯೂ ಅಷ್ಟೆ, ಜಾತಿ ಗಣತಿ ವರದಿಯನ್ನು ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸ್ವೀಕಾರ ಮಾಡಲಿಲ್ಲ ಅಂತ ಹೇಳಿದ್ದಾರೆ. ಕಾಂತರಾಜು ಅವರು ಸಿದ್ದರಾಮಯ್ಯ ಅವರ ಅವಧಿಯಲ್ಲಿ 2017 ರಲ್ಲಿಯೇ ವರದಿ ನೀಡಿದ್ದಾರೆ. ಹಿಂದುಳಿಸ ವರ್ಗದ ಚಾಂಪಿಯನ್ ಅಂತ ಹೇಳಿಕೊಳ್ಳುವವರು ಆಗ ಯಾಕೆ ಒಪ್ಪಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಕಾಂತರಾಜ್ ಅವರು ಅಧ್ಯಯನ ಮಾಡಿ ವರದಿ ಸಿದ್ದಪಡಿಸಿದ್ದರು. ಜಯಪ್ರಕಾಶ್ ಹೆಗಡೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ವರದಿ ತಿದ್ದುಪಡಿ ಮಾಡಿಸಿಕೊಂಡಿದ್ದಾರೆ. ಜಾತಿ ಗಣತಿ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಹಿಂದುಳಿದ ವರ್ಗದವರ ಅಭಿವೃದ್ಧಿ ಆಗಬೇಕು. ಇದು ಗೊಂದಲದ ಗೂಡಾಗಬಾರದು, ಸಮಾಜದಲ್ಲಿ ಗೊಂದಲ ಉಂಟು ಮಾಡಬಾರದು. ಸಿಎಂ ತಮ್ಮ ಮೇಲೆ ಮುಡಾ ಹಗರಣದ ಆರೋಪ ಬಂದ ಕೂಡಲೆ ಅದರಿಂದ ದಾರಿ ತಪ್ಪಿಸಲು ಜಾತಿ ಗಣತಿ ವರದಿ ಪ್ರಸ್ತಾಪ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು

Author

Leave a Reply

Your email address will not be published. Required fields are marked *