ಹೊಸ ಮೆಟ್ರೋ ಮಾರ್ಗಗಳು ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಾಣ: ಡಿಸಿಎಂ ಡಿ.ಕೆ.ಶಿವಕುಮಾರ್

Double Decker Model : ಬೆಂಗಳೂರಿನಲ್ಲಿ 100 ಕಿ.ಮೀ ಉದ್ದ ಸಿಗ್ನಲ್‌ ಫ್ರೀ ಕಾರಿಡಾರ್ ಮಾಡಲು 120- 150 ಕೋಟಿ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಅಂದಾಜು ವೆಚ್ಚ ತಿಳಿಸಿದ್ದಾರೆ‌. ವಿಶ್ವದರ್ಜೆ ಗುಣಮಟ್ಟದ ಡಬಲ್ ಡೆಕ್ಕರ್ ನಿರ್ಮಾಣ ಮಾಡಿದ್ದೇವೆ

ಬೆಂಗಳೂರು :”ಮುಂದಿನ ದಿನಗಳಲ್ಲಿ ಹೊಸ ಮೆಟ್ರೊ ಮಾರ್ಗಗಳನ್ನು ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಜಯನಗರದ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗೆ ಡಬಲ್ ಡೆಕ್ಕರ್ ಮಾರ್ಗದಲ್ಲಿ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡುವ ಮುನ್ನ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು “ಇಂದಿನ ದಿನಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳುವುದು ಕಷ್ಟದ ಕೆಲಸ. ಡಬಲ್ ಡೆಕ್ಕರ್ ಮಾದರಿಯಿಂದ ಸಂಚಾರ ದಟ್ಟಣೆ ಸೇರಿದಂತೆ ಅನೇಕ ಉಪಯೋಗಗಳಿವೆ. ಹೆಚ್ಚು ಖರ್ಚಾದರೂ ಈ ಮಾದರಿ ಬೆಂಗಳೂರಿಗೆ ಅನುಕೂಲ” ಎಂದರು.

ಪ್ರಸ್ತುತ ಐದು ಕಾಲು ಕಿ.ಮೀ ಉದ್ದ ಡಬಲ್ ಡೆಕ್ಕರ್ ನಿರ್ಮಾಣಕ್ಕೆ ಸುಮಾರು 450 ಕೋಟಿ ರೂಪಾಯಿ ಖರ್ಚಾಗಿದೆ. ಈಗಿನ ಲೆಕ್ಕಾಚಾರ ನೋಡಿದರೆ ಹೆಚ್ಚೇನಿಲ್ಲ‌ ನಾನು, ಮುಖ್ಯಮಂತ್ರಿಗಳು ಹಾಗೂ ರಾಮಲಿಂಗಾರೆಡ್ಡಿ ಅವರು ಅನೇಕ ವಿಚಾರಗಳನ್ನು ಚರ್ಚೆ ನಡೆಸಿದ್ದೇವೆ. ಬೆಂಗಳೂರಿನಲ್ಲಿ 100 ಕಿ.ಮೀ ಉದ್ದ ಸಿಗ್ನಲ್‌ ಫ್ರೀ ಕಾರಿಡಾರ್ ಮಾಡಲು 120- 150 ಕೋಟಿ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಅಂದಾಜು ವೆಚ್ಚ ತಿಳಿಸಿದ್ದಾರೆ‌. ವಿಶ್ವದರ್ಜೆ ಗುಣಮಟ್ಟದ ಡಬಲ್ ಡೆಕ್ಕರ್ ನಿರ್ಮಾಣ ಮಾಡಿದ್ದೇವೆ. ಬಿಬಿಎಂಪಿ ಮತ್ತು ಬಿಎಂಆರ್ ಸಿಎಲ್ ಈ ಯೋಜನೆಯ ವೆಚ್ಚವನ್ನು ಹಂಚಿಕೊಳ್ಳುತ್ತಾರೆ” ಎಂದರು.

5, 745 ಕೋಟಿ ವೆಚ್ಚದಲ್ಲಿ ಪೇಸ್ 2 ಯೋಜನೆ :

ಹೊಸೂರು ರಸ್ತೆ ಕಡೆ ತೆರಳುವ ಸುಮಾರು ಶೇ 30 ರಷ್ಟು ನಾಗರೀಕರಿಗೆ ಡಬಲ್ ಡೆಕ್ಕರ್ ನಿಂದ ಉಪಯೋಗವಾಗಲಿದೆ. ಎಲೆಕ್ಟ್ರಾನಿಕ್ ಸಿಟಿ, ಎಚ್ ಎಸ್ ಆರ್ ಲೇಔಟ್, ಮಹದೇವಪುರ ವಾಸಿಗಳಿಗೆ ಬಹಳ ಅನುಕೂಲವಾಗಲಿದೆ. 5 ಪಥಗಳುಳ್ಳ ಸುಮಾರು 9.5 ಕಿಮೀ ಉದ್ದವಿರುವ 5,745 ಕೋಟಿ ವೆಚ್ಚದಲ್ಲಿ ಆರ್ ವಿ ನಗರ ಮಹದೇವಪುರ ಎಲಿವೇಟೆಡ್ ಪೇಸ್ 2 ಯೋಜನೆಯನ್ನು ಜಾರಿಗೆ ಕಾರ್ಯಕ್ರಮ ರೂಪಿಸಲಾಗಿದೆ” ಎಂದರು.

ರಾಮಲಿಂಗರೆಡ್ಡಿ ಮಾದರಿ ಜಾರಿ :

ಡಬಲ್ ಡೆಕ್ಕರ್ ಮಾದರಿಯನ್ನು ಅಧ್ಯಯನ ಮಾಡಲು ರಾಜ್ಯದಿಂದ ಅಧಿಕಾರಿಗಳ ತಂಡವನ್ನು ನಾಗ್ಪುರಕ್ಕೆ ಕಳುಹಿಸಿದ್ದೇ. ಈ ಸಾಕ್ಷಿ ಗುಡ್ಡೆ ನಿರ್ಮಾಣವಾಗಲು ಹಿಂದೆ ಇರುವ ಶಕ್ತಿ ರಾಮಲಿಂಗಾರೆಡ್ಡಿ ಅವರು. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಈ ಯೋಜನೆ ಜಾರಿಯಾದರೂ ಅದನ್ನು ರಾಮಲಿಂಗಾರೆಡ್ಡಿ ಮಾಡೆಲ್ ಎಂದು ಹೇಳುತ್ತೇನೆ. ಬೆಂಗಳೂರು ಅಭಿವೃದ್ಧಿ ಸಚಿವನಾಗಿದ್ದೇನೆ. ಈ ಸ್ಥಾನದಲ್ಲಿ ಕಳೆದ ಆಡಳಿತ ಅವಧಿಯಲ್ಲಿ ರಾಮಲಿಂಗಾರೆಡ್ಡಿ ಅವರು ಹಾಗು ಬಿಎಂಆರ್ ಸಿಎಲ್ ಎಂಡಿಯಾಗಿ ಕೊರೊಲಾ ಇದ್ದರು. ಇವರಿಬ್ಬರು ಚರ್ಚೆ ನಡೆಸಿ ಹೊಸತನದ ಡಬಲ್ ಡೆಕ್ಕರ್ ಮಾಡಲ್ ಅನ್ನು ಪರಿಚಯಿಸಿದರು. ಇದನ್ನು ಉದ್ಘಾಟನೆ ಮಾಡುವ ಭಾಗ್ಯ ನನ್ನದಾಗಿದೆ. ನಾನು ನಾಗ್ಪುರದಲ್ಲಿ ಈ ಮಾದರಿಯನ್ನು ನೋಡಿಕೊಂಡು ಬಂದಿದ್ದೇ” ಎಂದು ತಿಳಿಸಿದರು.

“ಡಬಲ್ ಡೆಕ್ಕರ್ ಯೋಜನೆಯ ಉಪಯೋಗ ತಿಳಿಯಲು ಜನರು ಮೇಲೆ ಹಾಗೂ ಕೆಳಗೆ ಸಂಚರಿಸಿ ಅನುಭವ ಪಡೆಯಬೇಕು. ಈ ಯೋಜನೆ ವೀಕ್ಷಿಸಲು ನೂತನ ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಅವರಿಗೂ ಮನವಿ ಮಾಡಲಾಗುವುದು. ಪ್ರಾಯೋಗಿಕ ಸಂಚಾರ ನಡೆಸಿದ ಮೇಲೆ ಒಂದಷ್ಟು ಕುಂದುಕೊರತೆಗಳು ತಿಳಿಯುತ್ತವೆ. ಇದೆಲ್ಲವನ್ನು ಬಗೆಹರಿಸಿ ಜನರ ಓಡಾಟಕ್ಕೆ ಮುಕ್ತಗೊಳಿಸಲಾಗುವುದು” ಎಂದು ಹೇಳಿದರು.

ಟ್ರಯಲ್ ರನ್ ಅನ್ನು ನಡೆಸಿದ ಉದ್ದೇಶದ ಬಗ್ಗೆ ಕೇಳಿದಾಗ “ಯಾವುದೇ ಯೋಜನೆ ಇದ್ದರೂ ಸಣ್ಣ, ಪುಟ್ಟ ನ್ಯೂನ್ಯತೆಗಳು ಕಂಡು ಬರುತ್ತವೆ. ಇಳಿಯುವಾಗ, ಹತ್ತುವಾಗ ಅನುಕೂಲ, ಅನಾನುಕೂಲ ಎಲ್ಲವನ್ನು ಮನಗಾಣಬೇಕಾಗುತ್ತದೆ. ಎಲ್ಲಾ ಮಾದರಿಯ ವಾಹನಗಳು ಸಂಚರಿಸಬಹುದು ಯಾವುದೇ ನಿರ್ಬಂಧವಿಲ್ಲ. ಟನಲ್ ರಸ್ತೆ ವಿಚಾರವಾಗಿ ಮುಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿ ನಿಮ್ಮ ಮುಂದಿಡುತ್ತೇನೆ” ಎಂದರು.

ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ಬಗ್ಗೆ ಕೇಳಿದಾಗ “ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ದೊಡ್ಡ, ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಕ್ಯಾಬಿನೆಟ್ ಮುಂದೆ ತೆಗೆದುಕೊಂಡು ಹೋಗುವ ಮುಂಚಿತವಾಗಿ ಮುಖ್ಯಮಂತ್ರಿಯವರು ಹಾಗೂ ಬೆಂಗಳೂರಿನ ಮಂತ್ರಿಗಳ ಗಮನಕ್ಕೆ ತರಬೇಕಾಗಿತ್ತು. ಎಲ್ಲರ ಸಲಹೆ ಪಡೆದುಕೊಂಡಿದ್ದೇನೆ. ಜುಲೈ 27 ರಂದು ಬೆಂಗಳೂರಿನ ಎಲ್ಲಾ ಶಾಸಕರ ಸಭೆ ಕರೆಯಲಾಗಿದೆ” ಎಂದರು.

ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ :

ಡಿ.ಕೆ.ಶಿವಕುಮಾರ್ ಅವರಿಂದ ಬ್ರಾಂಡ್ ಬೆಂಗಳೂರು ಮಾಡಲು ಸಾಧ್ಯವೇ ಇಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ “ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ. ನಾನು ಹಳ್ಳಿಯಿಂದ ಬಂದವನು, ನನಗೆ ತಿಳಿದಂತೆ ನಿಮ್ಮಂತವರಿಂದ ಅನುಭವ ಪಡೆದು ಕೆಲಸ ಮಾಡುತ್ತಿದ್ದೇನೆ” ಎಂದು ಹೇಳಿದರು.

Author

error: