ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವ ಸಿ,ಟಿ. ರವಿ ಅವರದು ಹಾವು ಮುಂಗುಸಿ ಸಂಬಂಧ. ಒಬ್ಬರ ಕಾಲು ಒಬ್ಬರು ಎಳೆಯುತ್ತ ಬಂದವರು. ಸಿ ಟಿ. ರವಿ ಹಾಗೂ ಬಿ.ಎಲ್. ಸಂತೋಷ್ ಅವರ ಕಾಲಾಳು. ಅವರು ಹೇಳಿದ್ದನ್ನು ಅನುಷ್ಠಾನಗೊಳಿಸುವ ಗಣಾಧಾರಿ.
ಯಡಿಯೂರಪ್ಪ ಸ್ವತಂತ್ರ ವ್ಯಕ್ತಿತ್ವದ ನಾಯಕ. ಎದೆಯನ್ನು ಬಗ್ಗಿಸದೇ ತಲೆಯನ್ನು ಬಗ್ಗಿಸದೇ ರಾಜಕಾರಣ ಮಾಡುತ್ತ ಬಂದವರು. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲು ಷಡ್ಯಂತ್ರ ರೂಪಿಸಿದವರೇ ಸಂತೋಷ್, ಸಿ ಟಿ ರವಿ ಕಂಪನಿ. ಈ ಕಾರ್ಯಾಚರಣೆ ಯಶಸ್ವಿಯಾದ ಮೇಲೆ ರವಿ ಅವರಿಗೆ ದೆಹಲಿ ಮಟ್ಟದಲ್ಲಿ ಭಾರಿ ಮನ್ನಣೆ ದೊರಕಿತು.
ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದರು. ಆದರೆ ಕಾಲ ಯಾರ ಕಾಲನ್ನಾದರೂ ಎಳೆಯುತ್ತದೆ. ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಸಂತೋಷ್ ಅವರ ಮಾತು ಕೇಳಿದ ಬಿಜೆಪಿ ಸಂಪೂರ್ಣವಾಗಿ ನೆಲ ಕಚ್ಚಿತು. ಸೋಲು ಪಕ್ಷವನ್ನೇ ಅಲ್ಲಾಡಿಸಿಬಿಟ್ಟಿತು.
ಆಗ ಮೋದಿ ಮತ್ತು ಶಾ ಅವರ ಬಿಜೆಪಿ ಯಡಿಯೂರಪ್ಪ ಅವರ ಮುಂದೆ ತಲೆ ಬಾಗಿತು. ಸಂತೋಷ್ ಕರ್ನಾಟಕ ರಾಜಕಾರಣದಿಂದ ಮೂಲೆಗುಂಪಾದರು.ಅದರ ಜೊತೆಗೆ ಸಿ ಟಿ. ರವಿ ಸೇರಿದಂತೆ ಸಂತೋಷ್ ಅವರ ಗುಂಪು ಮೂಲೆ ಸೇರಿತು. ಸಿ.ಟಿ. ಕರ್ನಾಟಕದಲ್ಲಿ ಅಲ್ಲಿ ಇಲ್ಲಿ ಒಡಾಡುತ್ತ ಸೀಟಿ ಊದಿ ಕಾಲ ಕಳೆಯುವಂತಾಯಿತು.
ಇವತ್ತು ಲೋಕ ಸಭಾ ಚುನಾವಣೆಯ ಪ್ರಚಾರಕ್ಕಾಗಿ ಯಡಿಯೂರಪ್ಪ ಅವರು ಚಿಕ್ಕಮಗಳೂರಿಗೆ ಹೋಗಿದ್ದರು. ಅಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಿ.ಟಿ. ರವಿ ಕೂಡ ಪಾಲ್ಗೊಂಡಿದ್ದರು. ಹಾಗೆ ಯಡಿಯೂರಪ್ಪ ಅವರಿಗೆ ಸಂಪೂರ್ಣವಾಗಿ ಶರಣಾಗಿದ್ದರು ರವಿ.
ಇದೇ ಸಭೆಯಲ್ಲಿ ರವಿ ಅವರಿಗೆ ಅನ್ಯಾಯವಾಗಿದೆ ಅದನ್ನು ಸರಿಪಡಿಸುತ್ತೇನೆ ಎಂಬ ಭರವಸೆಯನ್ನು ಯಡಿಯೂರಪ್ಪ ನೀಡಿದರು. ಆಗ ಅವರೆಡೆಗೆ ಸಿ.ಟಿ. ರವಿ ನೋಡುತ್ತಿದ್ದರು. ಆದರೆ ರವಿ ಕಂಪೆನಿ ತಮಗೆ ಅನ್ಯಾಯ ಮಾಡಿದ್ದನ್ನು ಅವರು ಹೇಳಲಿಲ್ಲ.
