ಬಳ್ಳಾರಿ: ಕಾರ್ಪೊರೇಟರೊಬ್ಬರನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಬಳ್ಳಾರಿ ನಗರದ ಅಂದ್ರಾಳ್ ಏರಿಯಾದಲ್ಲಿ ನಡೆದಿದೆ. ಬಳ್ಳಾರಿ ಮಹಾನಗರ ಪಾಲಿಕೆಯ 8ನೇ ವಾರ್ಡ್ನ ಪಾಲಿಕೆಯ ಸದಸ್ಯ ಅಂದ್ರಾಳ್ ಸೀತರಾಮ್ ಮೇಲೆ ದುಷ್ಕರ್ಮಿಗಳು ಖಾರದ ಪುಡಿ ಕಣ್ಣಿಗೆ ಎರಚಿ ಮಾರಾಕಸ್ತ್ರಗಳಿಂದ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ಕೃತ್ಯವನ್ನು ಆಂಧ್ರ ಮೂಲದ ದುಷ್ಕರ್ಮಿಗಳು ನಡೆಸಿದ್ದು, ಪೋಲಿಸರು ಈಗಾಗಲೇ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಗರದ ಆಂದ್ರಳ್ ನಗರದಲ್ಲಿ ದುಷ್ಕರ್ಮಿಗಳು ಮೊದಲು ಕಣ್ಣಿಗೆ ಖಾರದಪುಡಿ ಎರಚಿದ್ದಾರೆ. ತದ ನಂತರ ಲಾಂಗ್ ಮಚ್ಚುಗಳಿಂದ ಹಲ್ಲೆ ಮಾಡಲು ಪ್ರಯತ್ನಿಸಿದಾಗ ಕಾರ್ಪೊರೇಟರ್ ಹೇಗೋ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಮಾಹಿತಿ ತಿಳಿದು ಎಪಿಎಂಸಿ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಕೃತ್ಯಕ್ಕೆ ಬಳಕೆ ಮಾಡಿದ್ದ ಲಾಂಗುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.